ನವದೆಹಲಿ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ವ್ಹೀಲ್ಚೇರ್ನಲ್ಲಿ ಕೂರಿಸಿ ವಿವಿಧ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗುತ್ತಿದೆ.
ಮಾಜಿ ಸಚಿವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮಂಗಳವಾರ ರಾತ್ರಿಯೇ ರಾಮ್ ಮನೋಹರ್ ಲೋಹಿಯಾ (ಆರ್ಎಂಎಲ್) ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ಬಿಪಿ ಹಾಗೂ ಶುಗರ್ ನಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಹೀಗಾಗಿ ಅವರನ್ನು ನಿನ್ನೆಯಿಂದಲೇ ವಿವಿಧ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ವಿವಿಧ ತಪಾಸಣೆ ಹಿನ್ನಲೆಯಲ್ಲಿ ಆರ್ಎಂಎಲ್ ಆಸ್ಪತ್ರೆ ಸಿಬ್ಬಂದಿ ಡಿ.ಕೆ.ಶಿವಕುಮಾರ್ ಅವರನ್ನು ವ್ಹೀಲ್ಚೇರ್ನಲ್ಲಿ ಕರೆದುಕೊಂಡು ಹೋಗುತ್ತಿರುವ ಫೋಟೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಆಸ್ಪತ್ರೆಯ ಒಳಗಿದ್ದ ಕಾಂಗ್ರೆಸ್ ಶಾಸಕರು ಹಾಗೂ ಮುಖಂಡರನ್ನು ಇಡಿ ಅಧಿಕಾರಿಗಳು ಹೊರಗೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಮಾತನಾಡಿದ್ದ ಸಂಸದ ಡಿ.ಕೆ.ಸುರೇಶ್ ಅವರು, ಅಣ್ಣನಿಗೆ ಔಷಧಿ ಕೊಡಲು ನನ್ನನ್ನು ಕೂಡ ಒಳಗೆ ಹೋಗಲು ಬಿಡುತ್ತಿಲ್ಲ. ಹಿರಿಯ ಅಧಿಕಾರಿಗಳ ನಿರ್ದೇಶನದಂತೆ ಹೀಗೆ ಮಾಡುತ್ತಿದ್ದಾರೆ. ಈ ಸಮಸ್ಯೆಯಿಂದ ಹೊರ ಬರಲು ನಮ್ಮದೇ ಆದ ಪ್ಲಾನ್ಗಳಿವೆ ಎಂದು ಹೇಳಿದ್ದರು.
ಆಸ್ಪತ್ರೆಯಿಂದ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರಾದ ಮಾಜಿ ಸಂಸದ ಉಗ್ರಪ್ಪ, ಧ್ರುವನಾರಯಣ್, ಶಾಸಕ ರಾಮಲಿಂಗರೆಡ್ಡಿ, ಈ ಬಾರಿ ಮಂಗಳೂರು ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಸೇರಿದಂತೆ ಎಲ್ಲರನ್ನೂ ಇಡಿ ಅಧಿಕಾರಿಗಳು ಭದ್ರತಾ ಪಡೆ ಸಹಾಯ ಪಡೆದು ಹೊರ ಹಾಕಿದ್ದಾರೆ.