ನವದೆಹಲಿ: ರಾಜ್ಯಸಭೆ ಸ್ಥಾನ ಆಕಾಂಕ್ಷಿ ನಾನಲ್ಲ, ರಾಜ್ಯಸಭೆಗೆ ನಾನು ಸ್ವರ್ಧಿಸುವುದಿಲ್ಲ ಎಂದು ಮಾಜಿ ಸಂಸದ ಕೆ.ಹೆಚ್ ಮುನಿಯಪ್ಪ ಪ್ರತಿಕ್ರಿಯಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಹಿರಿಯ ಸದಸ್ಯ ಎಂಟು ಬಾರಿ ಲೋಕಸಭೆಗೆ ಪಕ್ಷ ಟಿಕೆಟ್ ನೀಡಿದೆ. ಸಾಕಷ್ಟು ಅವಕಾಶ ನೀಡಿರುವಾಗ ಈಗ ನಾನು ರಾಜ್ಯಸಭೆಗೆ ಟಿಕೆಟ್ ಕೇಳುವುದಿಲ್ಲ ಎಂದಿದ್ದಾರೆ.
ಮುಂದಿನ ಎರಡು ವರ್ಷಗಳ ಕಾಲ ಪಕ್ಷದ ಕೆಲಸಗಳನ್ನು ಮಾಡಲು ನಿರ್ಧರಿಸಿದ್ದೇನೆ. ಸಂಘಟನಾತ್ಮವಾಗಿ ಯಾವುದೇ ಕೆಲಸ ನೀಡಿದರೂ ಪಕ್ಷದ ಕೆಲಸ ಮಾಡುತ್ತೇನೆ ಎಂದರು. ಕೆಪಿಸಿಸಿ ಹುದ್ದೆಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಯಾರನ್ನು ಭೇಟಿ ಮಾಡಿಲ್ಲ. ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಕೆಲವು ನಾಯಕರು ನನ್ನ ಹೆಸರು ಸೂಚಿಸಿದ್ದಾರೆ. ಒಂದು ವೇಳೆ ಪಕ್ಷ ಅವಕಾಶ ನೀಡಿದ್ದಲ್ಲಿ ನಾನು ನಿಭಾಯಿಸಬಲ್ಲೆ ಎಂದು ತಿಳಿಸಿದರು.
ಸಿಎಎ ಸಂಬಂಧ ಮಾತನಾಡಿದ ಅವರು, ದೇಶವನ್ನು ಧರ್ಮದ ಆಧಾರದಲ್ಲಿ ಇಬ್ಭಾಗ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ವಾಸವಿರುವ ಜನರ ರಕ್ಷಣೆ ಮಾಡಬೇಕಿದೆ. ಎನ್ಆರ್ಸಿ ದೇಶದ ವಿರುದ್ಧವಾಗಿದೆ 70 ವರ್ಷದ ಇತಿಹಾಸದಲ್ಲಿ ಇಂತಹ ಸ್ಥಿತಿ ಎಂದು ಕಂಡಿರಲಿಲ್ಲ. ಜಾತಿಗಳ ನಡುವೆ ಒಡೆದು ಆಳುವ ನೀತಿ ಬಿಜೆಪಿ ಮಾಡುತ್ತಿದೆ. ಜಿಡಿಪಿ 4ರ ಕೆಳಗೆ ಬಂದಿದೆ ದೇಶದಲ್ಲಿ ಹೂಡಿಕೆದಾರರು ಬಂಡವಾಳ ಹೂಡಲು ಹಿಂಜರಿಯುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಮೇಲೆ ಕಿಡಿಕಾರಿದರು.