ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದೆಹಲಿ ಕನ್ನಡಿಗರು ಒಂದು ತಿಂಗಳ ರೇಷನ್ ನೀಡುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.
ದೆಹಲಿಯಲ್ಲಿರುವ ನಾಡಪ್ರಭು ಕೆಂಪೇಗೌಡ ಫೌಂಡೇಷನ್, ಸಾಮಾಜಿಕ ಪ್ರಗತಿ ಶೀಲಾ ಸಂಸ್ಥೆ ನೇತೃತ್ವದಲ್ಲಿ ಹಲವು ಕನ್ನಡಿಗರು ಈ ನೆರವು ನೀಡಿದ್ದಾರೆ. ಆರ್.ಕೆ ಪುರಂನಲ್ಲಿರುವ ಕುಷ್ಠ ರೋಗಿಗಳ ಕಾಲೋನಿ ಮತ್ತು ಲಜಪತ್ ನಗರದಲ್ಲಿರುವ ಸುಮಾರು ನೂರು ನಿರಾಶ್ರಿತ ಕನ್ನಡಿಗ ಕುಟುಂಬಗಳಿಗೆ ನೆರವು ನೀಡಿದ್ದಾರೆ.
ಹತ್ತು ಕೆಜಿ ಅಕ್ಕಿ, ಹತ್ತು ಕೆಜಿ ಗೋಧಿ, ಎರಡು ಲೀಟರ್ ಎಣ್ಣೆ, ಐದು ಕೆಜಿ ಸಕ್ಕರೆ ಒಳಗೊಂಡಂತೆ ಒಂದು ತಿಂಗಳಿಗಾಗುವ ಪಡಿತರ ಹಾಗೂ ಮಾಸ್ಕ್ ಗಳನ್ನು ವಿತರಿಸಲಾಯಿತು. ಕೆಂಪೇಗೌಡ ಫೌಂಡೇಷನ್ ಅಧ್ಯಕ್ಷ ಬಿ.ಎಲ್ ಸುರೇಶ್, ಕಾರ್ಯದರ್ಶಿ ಸಿಎಂ ನಾಗರಾಜ್, ಪ್ರಗತಿ ಶೀಲಾ ಸಂಸ್ಥೆಯ ಅಧ್ಯಕ್ಷ ವಿ.ವಿ ಬಿರಾದರ್, ಕಾರ್ಯದರ್ಶಿ ಆನಂದ ಮುರಗೋಡ್ ಸೇರಿ ಹಲವು ದೆಹಲಿ ಕನ್ನಡಿಗರು ಭಾಗಿಯಾಗಿದ್ದರು.