ನವದೆಹಲಿ: ಪಾದರಾಯಣಪುರ ಘಟನೆಯ ಹಿಂದೆ ಶಾಸಕ ಜಮೀರ್ ಅಹ್ಮದ್ ಕೈವಾಡವಿದೆ. ಇದೊಂದು ಪೂರ್ವ ನಿಯೋಜಿತ ಘಟನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಸ್ಥಾನ ಎನ್ನುವುದು ಜವಾಬ್ದಾರಿಯುತ ಸ್ಥಾನ, ಆ ಸ್ಥಾನದಲ್ಲಿ ಕುಳಿತು ತಪ್ಪಿತಸ್ಥರ ಪರ ಮಾತನಾಡುವುದು ಗಮನಿಸಿದರೇ ಇದರಲ್ಲಿ ಜಮೀರ್ ಅಹ್ಮದ್ ಪಾತ್ರ ಸ್ಪಷ್ಟವಾಗಿದೆ. ಜಮೀರ್ ಕಾರಣದಿಂದಲೇ ಆ ಕ್ಷೇತ್ರದ ಪರಿಸ್ಥಿತಿ ಹೀಗಾಗಿದೆ. ಘಟನೆಯನ್ನು ಸಮರ್ಥಿಸಿಕೊಳ್ಳುವುದು ನೋಡಿದರೇ ಇದು ಅವರ ಆಂತರಿಕ ಭಾವನೆಗಳನ್ನು ಪ್ರತಿಬಿಂಬಿಸುತ್ತಿದೆ ಇದನ್ನು ಸುಮ್ಮನೆ ಬಿಟ್ಟರೆ ಕೊರೊನಾಗಿಂತ ವೇಗವಾಗಿ ಹರಡಲಿದೆ ಎಂದು ಹರಿಹಾಯ್ದರು.
ಆಶಾ ಕಾರ್ಯಕರ್ತೆರ ಮೇಲೆ ದಾಳಿ ಆದಾಗಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಅದನ್ನು ಲಘುವಾಗಿ ಪರಿಗಣಿಸಿದಕ್ಕಾಗಿ ಈ ಘಟನೆ ನಡೆದಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ರಾಜ್ಯ ಗೃಹ ಸಚಿವರು ಕಠೋರ ನಿರ್ಧಾರಗಳಿಗೆ ಸೂಚನೆ ನೀಡಿದ್ದಾರೆ. ಇದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಪ್ರತಿಕೂಲ ವಾತಾವರಣ ಸೃಷ್ಟಿಸುವ ಜಮೀರ್ ಅಹ್ಮದ್ ಶಾಸಕ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ಅರ್ಹತೆ ಇಲ್ಲ. ಗೌರವದ ಗಂಧ ಗಾಳಿ ಗೊತ್ತಿದ್ದರೆ ರಾಜೀನಾಮೆ ಕೇಳಬಹುದಿತ್ತು. ರಾಜಕೀಯ ಅವಕಾಶಕಕ್ಕಿರುವ ಜನರಿಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.