ನವದೆಹಲಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ರಾಜಧಾನಿ ದೆಹಲಿಯಲ್ಲಿ ಸಂಪೂರ್ಣ ಸ್ತಬ್ಧವಾಗಿದ್ದು ಗಡಿ ಪ್ರದೇಶಗಳನ್ನು ಬಂದ್ ಮಾಡಿ ನಿಷೇಧಾಜ್ಞೆ ಹೇರಲಾಗಿದೆ. ಯಾರೊಬ್ಬರೂ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ನೀಡಲಾಗಿದೆ.
ನಿಷೇಧಾಜ್ಞೆ ನಡುವೆ ಮನೆಯಿಂದ ಹೊರ ಬರುವ ಜನರ ವಿರುದ್ಧ ಪೋಲಿಸರು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ರಸ್ತೆಗಿಳಿದ ಚಾಲಕರ ಕಾರ್ ಮತ್ತು ಬೈಕ್ ಗಳನ್ನು ದೆಹಲಿ ಪೋಲಿಸರು ಸೀಜ್ ಮಾಡುತ್ತಿದ್ದಾರೆ. ಅಗತ್ಯ ಕೆಲಸಗಳಿಗೆ ಮಾತ್ರ ಹೊರ ಬರಲು ಸೂಚಿಸಿದ್ದು ಸರ್ಕಾರಿ ಸೇವೆ, ಮಾಧ್ಯಮದವರು, ವೈದ್ಯಕೀಯ ಕಾರಣಗಳನ್ನು ಹೊರತು ಪಡೆಸಿ ಸುಖಾ ಸುಮ್ಮನೆ ಹೊರ ಬರುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಪೊಲೀಸರ ಜೊತೆ ವಾಗ್ದಾದ ನಡೆಸುವ ವ್ಯಕ್ತಿಗಳನ್ನು ಬಂಧಿಸಿ ಠಾಣೆಗೆ ಕರೆದ್ಯೊಲಾಗುತ್ತಿದೆ.
ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ ಯಾವುದೇ ಹೊರ ಕೊರೊನಾ ಸೋಂಕುಗಳು ಪತ್ತೆಯಾಗಿಲ್ಲ. ಇದೇ ಪರಿಸ್ಥಿತಿಯನ್ನು ಮುಂದುವರೆಸಬೇಕಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿ ಮೂರನೇ ಹಂತ ತಲುಪಿದರೆ ಏನು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ಮಾಡಲಾಗುತ್ತಿದೆ. ಐದು ಮಂದಿ ತಜ್ಞ ವೈದ್ಯರ ತಂಡವನ್ನು ರಚನೆ ಮಾಡಿದ್ದು, 24 ಗಂಟೆಯಲ್ಲಿ ವರದಿ ನೀಡಲಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಇನ್ನು ನಿಷೇಧಾಜ್ಞೆಯಂದ ಕೂಲಿ ಕಾರ್ಮಿಕರಿಗೆ ತೊಂದರೆಯಾಗಿದ್ದು 5,000 ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಅಲ್ಲದೇ ನಿರಾಶ್ರಿತರ ಊಟಕ್ಕಾಗಿ ಕೇಂದ್ರಗಳನ್ನು ಆರಂಭಿಸಿದ್ದು ಮಧ್ಯಾಹ್ನ ಮತ್ತು ರಾತ್ರಿಯ ಊಟ ಉಚಿತವಾಗಿ ವಿತರಿಸಲಾಗುತ್ತಿದೆ.