ನವದೆಹಲಿ: ಭಾರಿ ಬಹುಮತದೊಂದಿಗೆ ಗೆಲವು ಸಾಧಿಸಿದ್ದ ಆಮ್ ಅದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ಇಂದು ಮೂರನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೆಫ್ಟಿನೆಂಟ್ ಗವರ್ನರ್ ಅನೀಲ್ ಬೈಜಾಲ್ ಪ್ರಮಾಣ ವಚನ ಬೋಧಿಸಿದರು. ಅರವಿಂದ ಕೇಜ್ರಿವಾಲ್ ಜೊತೆಗೆ ಮನೀಷ್ ಸಿಸೊಡಿಯಾ, ಸತ್ಯೇಂದ್ರ ಜೈನ್, ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಇಮ್ರಾನ್ ಹುಸೇನ್, ರಾಜೇಂದ್ರ ಗೌತಮ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಶಿಕ್ಷಕರು, ಬಸ್ ಮಾರ್ಷಲ್ಗಳು, ಕಂಡಕ್ಟರ್, ಅಗ್ನಿಶಾಮಕ ದಳದ ಕಾರ್ಯಾಚರಣೆ ವೇಳೆ ಜೀವ ಕಳೆದುಕೊಂಡವರ ಕುಟುಂಬ ವರ್ಗ, ಆಟೋರಿಕ್ಷಾ ಚಾಲಕರು, ರೈತರು, ಅಂಗನವಾಡಿ ನೌಕರರು, ಕ್ರೀಡಾಪಟುಗಳು, ಐಐಟಿ ಮತ್ತು ವೈದ್ಯಕೀಯ ವಿದ್ಯಾರ್ಥಿಗಳು, ಪಿಡಬ್ಲ್ಯೂಡಿ ಎಂಜಿನಿಯರ್ಗಳು ಸೇರಿ ವಿವಿಧ ವಲಯದಲ್ಲಿ ಕೆಲಸ ಮಾಡುವ 60 ಹೆಚ್ಚು ಮಂದಿಯನ್ನು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಚೋಟಾ ಮಫ್ಲರ್ ಮಾನ್ಯ ಖ್ಯಾತಿಯ ಅವ್ಯಾನ್ ಯಥಾವತ್ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ. ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದ ಕಾರ್ಯಕರ್ತರು ಕೇಜ್ರಿವಾಲ್ ಪರ ಘೋಷಣೆ ಕೂಗಿದರು.
ಪ್ರಮಾಣ ವಚನ ಕಾರ್ಯಕ್ರಮ ಬಳಿಕ ಮಾತನಾಡಿದ ಕೇಜ್ರಿವಾಲ್, ಚುನಾವಣೆ ಮುಗಿದಿದೆ ಯಾರು ಯಾರಿಗೆ ವೋಟ್ ನೀಡಿದರು ಎಂಬುದು ಮುಖ್ಯವಲ್ಲ. ಎಲ್ಲರ ಮುಖ್ಯಮಂತ್ರಿಯಾಗಿ ಮುಂದಿನ ಐದು ವರ್ಷಗಳ ಕಾಲ ಅಭಿವೃದ್ಧಿ ಕಡೆ ಗಮನ ಹರಿಸುತ್ತೇವೆ ಎಂದರು. ಅಭಿವೃದ್ಧಿ ಹೊಸ ಚರ್ಚೆಯನ್ನು ದೆಹಲಿ ಚುನಾವಣೆ ಹುಟ್ಟುಹಾಕಿದ್ದು, ಆಸ್ಪತ್ರೆ ಶಾಲೆ ರಸ್ತೆಗಳ ಅಭಿವೃದ್ಧಿ ಮಾದರಿಯನ್ನು ಇತರೆ ರಾಜ್ಯಗಳು ಹಿಂಬಾಲಿಸುತ್ತಿವೆ ಎಂದರು. ಕಡೆಯಲ್ಲಿ ಹಮ್ ಹೋಂಗೆ ಕಾಮ್ಯಾಬ್ ಹಮ್ ಹೋಂಗೆ ಕಾಮ್ಯಾಬ್ ಎಂಬ ಹಾಡನ್ನು ಹಾಡಿದರು. ಇದಕ್ಕೆ ಅಲ್ಲಿ ಸೇರಿದ್ದ ಜನ ಸಮೂಹ ದನಿಗೂಡಿಸಿದರು.
#WATCH Arvind Kejriwal takes oath as Chief Minister of Delhi for a third term pic.twitter.com/C66e3cgxXw
— ANI (@ANI) February 16, 2020