ಮಂಗಳೂರು: ನಗರದ ಸರ್ಕಾರಿ ಲೇಡಿಗೋಶನ್ ಹೆರಿಗೆ ಆಸ್ಪತ್ರೆಯಲ್ಲಿ ರೋಗಿಗಳು ಮಳೆಗಾಲದಲ್ಲಿ ಪಡುವ ದುಸ್ಥಿತಿ ಯಾರಿಗೂ ಬೇಡ.
ಹಳೆ ಆಸ್ಪತ್ರೆ ಎದುರಲ್ಲೇ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದೆ. ಎಂಆರ್ ಪಿಎಲ್ ಸಹಯೋಗದಲ್ಲಿ 21 ಕೋಟಿ ವೆಚ್ಚದಲ್ಲಿ 290 ಹಾಸಿಗೆ ಸಾಮಥ್ರ್ಯದ ಆರು ಅಂತಸ್ತಿನ ಬೃಹತ್ ಆಸ್ಪತ್ರೆ ತಲೆಯೆತ್ತಿ ನಿಂತಿದೆ. ಕಟ್ಟಡದ ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದೆ. ಆದರೆ ಇನ್ನು ಉದ್ಘಾಟನೆ ಭಾಗ್ಯ ಮಾತ್ರ ದೊರೆತಿಲ್ಲ. ಅಲ್ಲದೇ ಆಸ್ಪತ್ರೆಗೆ ಅಗತ್ಯವುಳ್ಳ ಸಾಮಾಗ್ರಿಗಳೂ ಪೂರೈಕೆಯಾಗಿಲ್ಲ. ಹೀಗಾಗಿ ಬಾಣಂತಿಯರು ಸೇರಿದಂತೆ ಈಗತಾನೆ ಹುಟ್ಟಿದ ಶಿಶುಗಳನ್ನು ಹಳೆ ಕಟ್ಟಡದ ನೆಲದಲ್ಲಿಯೇ ಹಾಸಿಗೆ ಹಾಸಿಕೊಂಡು ಮಲಗಿಸಿದ್ದಾರೆ.
ಒಂದುಕಡೆ ಸೋರುವ ಕಟ್ಟಡ, ಮತೊಂದೆಡೆ ಮಳೆ ನೀರಿನ ಹೊಡೆತ, ಸೊಳ್ಳೆ ಕಡಿತ ಇವೆಲ್ಲವನ್ನೂ ಸಹಿಸಿಕೊಂಡು ಬಡ ರೋಗಿಗಳು ಕಾಲ ಕಳೆಯಬೇಕು. ಬಾಣಂತಿಯರಿಗೆ ಯಾವುದೇ ಕಾರಣಕ್ಕೂ ಮಳೆಯ ಹೊಡೆತ ತಾಗದಂತೆ ಜಾಗ್ರತೆ ವಹಿಸಬೇಕು. ಆದರೆ ಈ ಆಸ್ಪತ್ರೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಹೊಸ ಆಸ್ಪತ್ರೆ ಕಟ್ಟಡ ರೆಡಿಯಾಗಿದ್ರೂ, ಇನ್ನೂ ಸ್ಥಳಾಂತರ ಮಾಡಿಲ್ಲ.
ಹಳೆಯ ಹಂಚಿನ ಕಟ್ಟಡದಲ್ಲಿ ಮಳೆಯ ಹೊಡೆತದ ಮಧ್ಯೆಯೇ ಬಡ ರೋಗಿಗಳನ್ನು ಸತಾಯಿಸುತ್ತಿದ್ದಾರೆ. ಹಳೆ ಕಟ್ಟಡದ ಒಂದು ಭಾಗದಲ್ಲಂತು ಮಳೆಗೆ ಅಡ್ಡಲಾಗಿ ಟರ್ಪಾಲ್ ಹೊದಿಕೆ ಹಾಕಿದ್ದು, ಒಳಭಾಗದಲ್ಲಿ ಬಾಣಂತಿಯರ ಶುಶ್ರೂಷೆ ಹೇಗಿರುತ್ತೋ ಗೊತ್ತಿಲ್ಲ. ಇದಲ್ಲದೆ ಸಿಸೇರಿಯನ್ ಆದವರೂ ಇದೇ ಶೀತ ಕಾರುವ ನೆಲದಲ್ಲಿ ದಿನ ದೂಡವ ಪರಿಸ್ಥತಿ ಎದುರಾಗಿದೆ.