ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸಾಂಸ್ಕೃತಿಕ, ದೈಹಿಕ ಶಿಕ್ಷಣ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ಒತ್ತು ಕೊಡಲಾಗಿದ್ದು, ಇವೆಲ್ಲವನ್ನೂ ಕಡ್ಡಾಯಗೊಳಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಮಲ್ಲೇಶ್ವರಂ 18ನೇ ಅಡ್ಡರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು, ಕನ್ನಡ ರಾಜ್ಯೋತ್ಸವ ಮತ್ತು 2021-22ನೇ ಸಾಲಿನ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಎಇಪಿಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ವಿಕಸನದ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಸರ್ಕಾರಿ ಕಾಲೇಜುಗಳ ಸಂಪೂರ್ಣ ಡಿಜಿಟಲೀಕರಣವನ್ನು ಮಾಡಿದ್ದು, ಈ ವಿಚಾರದಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ಬೋಧನಾ ವ್ಯವಸ್ಥೆಯ ಡಿಜಿಟಲೀಕರಣದಿಂದ ಶಿಕ್ಷಣದ ಗುಣಮಟ್ಟ ಸಾಕಷ್ಟು ಸುಧಾರಿಸಲಿದೆ ಎಂದು ನುಡಿದರು.
ಸರ್ಕಾರಿ ಕಾಲೇಜುಗಳಲ್ಲಿ ಇರುವಂತಹ ಆಧುನಿಕ ವ್ಯವಸ್ಥೆಗಳು ರಾಜ್ಯದ ಖಾಸಗಿ ವಿ.ವಿ.ಗಳಲ್ಲೂ ಇಲ್ಲ. ಇವತ್ತು ಇಡೀ ಭಾರತವೇ ಬೆಂಗಳೂರಿನತ್ತ ನೋಡುತ್ತಿದ್ದು, ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರಗಳಲ್ಲಿ ರಾಜ್ಯದ ರಾಜಧಾನಿಯು 23ನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಭಾರತದ ಬೇರೆ ಯಾವ ನಗರಗಳೂ ಇಲ್ಲ ಎಂದು ಅವರು ಉಲ್ಲೇಖಿಸಿದರು. ಇದನ್ನೂ ಓದಿ: ಪ್ಯಾರಾ ಒಲಿಂಪಿಕ್ಸ್ ಆಟಗಾರ ಸುಹಾಸ್ ಯತೀರಾಜ್ಗೆ ಬಂಪರ್ – ವಿಶೇಷ ಗೌರವಕ್ಕೆ ಭಾಜನರಾದ ಕನ್ನಡಿಗ
ಬೆಂಗಳೂರು ಇವತ್ತು ಸುವರ್ಣಾವಕಾಶಗಳ ನಗರವಾಗಿದೆ. ವಿದ್ಯಾರ್ಥಿಗಳು ಕೇವಲ ಅದೃಷ್ಟವನ್ನು ನಂಬಿ ಕೂರದೇ, ಶ್ರಮ ವಹಿಸಿ ಸಾಧನೆ ಮಾಡಿ, ಇರುವ ಅವಕಾಶಗಳನ್ನು ತಮ್ಮದನ್ನಾಗಿಸಿಕೊಳ್ಳಬೇಕು ಎಂದು ಹೇಳಿದರು.
ಕನ್ನಡಿಗರು ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು. ಜಗತ್ತಿನ ಮೂಲೆಮೂಲೆಗಳಲ್ಲೂ ಇಂದು ಕನ್ನಡಿಗ ಸಾಧಕರಿದ್ದಾರೆ. ವಿದ್ಯಾರ್ಥಿ ಸಮುದಾಯವು ಇಂಥವರಿಂದ ಪ್ರೇರಣೆ ಪಡೆದುಕೊಳ್ಳಬೇಕು. ನಮ್ಮ ನಾಡು-ನುಡಿ ಚೆನ್ನಾಗಿರಬೇಕೆಂದರೆ ಕನ್ನಡಿಗರು ಸದೃಢವಾಗಿ ಬೆಳೆಯಬೇಕು ಎಂದರು. ಇದನ್ನೂ ಓದಿ: ಬೊಮ್ಮಾಯಿ ಗೃಹಮಂತ್ರಿಯಾಗಿದ್ದಾಗ ಬಿಟ್ ಕಾಯಿನ್ ಹಗರಣ ನಡೆದಿದೆ: ಸುರ್ಜೆವಾಲಾ
ಕಾರ್ಯಕ್ರಮದಲ್ಲಿ ನಿರೂಪಕಿ ಅಪರ್ಣಾ, ಪ್ರಾಂಶುಪಾಲರಾದ ಡಾ.ಡಿ.ಎಸ್. ಪ್ರತಿಭಾ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರತ್ನಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕಿ ಎಸ್.ಕೌಸಲ್ಯಾ ಮುಂತಾದವರು ಉಪಸ್ಥಿತರಿದ್ದರು.