ನೆಲಮಂಗಲ: ನಗರದ ಹರ್ಷ ಕಾಲೇಜಿನ ಸಭಾಂಗಣದಲ್ಲಿ ಕರ್ನಾಟಕ ಜನ ಸ್ಪಂದನ ಟ್ರಸ್ಟ್ ಆಯೋಜಿಸಿದ್ದ ಮಹಿಳಾ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಚಾಲನೆ ನೀಡಿದರು.
ಈ ವೇಳೆ ಲೀಲಾದೇವಿ ಆರ್. ಪ್ರಸಾದ್ ಮಾತನಾಡಿ, ಶೋಷಿತ ಮಹಿಳೆಯರಿಗೆ ಬದುಕು ಕಲ್ಪಿಸುವಂತಹ ನಿಜವಾದ ಕಾರ್ಯ ಮಹಿಳಾ ದಿನಾಚರಣೆಯ ಪ್ರತೀಕ. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶೋಷಿತ ಮಹಿಳೆಯರಿಗೆ ನ್ಯಾಯ ಕೊಡಿಸುವ ಸಲುವಾಗಿ ಆರಂಭವಾದ ಈ ದಿನವನ್ನು ಮಹಿಳಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಎಂದರು.
ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವೈ. ಬಿ.ಎಚ್ ಜಯದೇವ್ ಮಾತನಾಡಿ, ನಾಡು, ನುಡಿ, ನೆಲ, ಜಲ, ಪರಂಪರೆಗೋಸ್ಕರ ಅಹರ್ನಿಶಿ ಹೋರಾಟ ಮಾಡಿರುವ ಮಹಿಳೆಯರ ಪಾತ್ರ ದೊಡ್ಡದು ಎಂದರು.
ಚಕ್ರವರ್ತಿ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ವೇದಗಳಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಬದುಕಿನ ಸಂಕಷ್ಟಗಳನ್ನು ಸಶಕ್ತವಾಗಿ ಎದುರಿಸುವ ಮಹಿಳೆಯರನ್ನು ಗೌರವಿಸುವ, ಪುರಸ್ಕರಿಸುವ ಔದಾರ್ಯ ನಮ್ಮದಾಗಬೇಕಾಗಿದೆ ಎಂದು ಕರೆ ನೀಡಿದರು.
ಈ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರಿಗೆ ಸನ್ಮಾನಿಸಲಾಯಿತು. ಈ ಸುಸಂದರ್ಭದಲ್ಲಿ ಬಿಬಿಎಂಪಿ ಸದಸ್ಯೆ ಉಮಾದೇವಿ ನಾಗರಾಜು, ಅಧ್ಯಕ್ಷ ಹನುಮಂತಪ್ಪ ಮೇಡೆಗಾರ್, ಪದಾಧಿಕಾರಿಗಳಾದ ಬಸವನಗೌಡ, ಅಂಬಣ್ಣ ಮುಡಬಿ, ಸುರೇಶ್ ಬಿರಾದಾರ್, ಶರಣಯ್ಯ ಜಡೀಮಠ ಮುಂತಾದ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.