ನೆಲಮಂಗಲ: ಹೈಫೈ ಪಾರ್ಲರ್ ಮಾಲೀಕ ಶಶಿಕುಮಾರ್ ಅನುಮಾನಸ್ಪದ ರೀತಿಯಲ್ಲಿ ಸಾವನಪ್ಪಿದ, ಮೂರು ದಿನದ ನಂತರ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದೆ. ಪತ್ನಿಯೇ ಗೆಳೆಯನ ಜೊತೆ ಸೇರಿ ಈ ಕೊಲೆ ಮಾಡಿದ್ದಾಳೆ ಎಂದು ಶಶಿಕುಮಾರ್ ಸಂಬಂಧಿಕರು ಆರೋಪಿಸಿದ್ದಾರೆ.
ಬೆಂಗಳೂರಿನ ಕೆಲವು ಕಡೆ ಹೈಫೈ ಸಲೂನ್ ಪಾರ್ಲರ್ ನಡೆಸುತ್ತಿದ್ದ ಶಶಿಕುಮಾರ್ ಸಾವಿನ ಬಗ್ಗೆ ಪತ್ನಿ ಪಲ್ಲವಿ ದ್ವಂದ್ವ ಉತ್ತರ ನೀಡಿದ್ದೇ ಅನುಮಾನಕ್ಕೆ ಕಾರಣವಾಗಿದೆ. ಈ ಸಂಬಂಧ ಶಶಿಕುಮಾರ್ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆ ಒಳಪಡಿಸಿ, ತನಿಖೆ ನಡೆಸಬೇಕು ಎಂದು ಸಹೋದರರಾದ ಶಿವಕುಮಾರ್ ಮತ್ತು ಮಂಜುನಾಥ್ ಆಗ್ರಹಿಸಿದ್ದಾರೆ.
ಕುಟುಂಬಸ್ಥರ ಆರೋಪ ಏನು?
ಎರಡು ತಿಂಗಳ ಹಿಂದೆ ಗೆಳೆಯ ಸತೀಶ್ ಎಂಬಾತನನ್ನು ಶಶಿಕುಮಾರ್ ತನ್ನ ವ್ಯವಹಾರದಲ್ಲಿ ಪಾಲುದಾರನನ್ನಾಗಿ ಸೇರಿಸಿಕೊಂಡಿದ್ದ. ವ್ಯವಹಾರದ ಮಾತುಕತೆಯ ವೇಳೆ ಸತೀಶ್ ಗೆ ಶಶಿಕುಮಾರ್ ಪತ್ನಿ ಪಲ್ಲವಿಯ ಪರಿಚಯವಾಗಿದೆ. ಬಳಿಕ ಸತೀಶ್ ಪಲ್ಲವಿ ಜೊತೆಗೆ ಒಡನಾಟ ಬೆಳೆಸಿಕೊಂಡಿದ್ದಾನೆ. ಮೊಬೈಲ್ನಲ್ಲಿ ಸತೀಶ್ ಹಾಗೂ ಪಲ್ಲವಿ ಮಾತನಾಡಲು ಪ್ರಾರಂಭಿಸಿದ್ದಾರೆ. ನಂತರ ಸತೀಶ್ ಮನೆಗೆ ಬರಲು ಪ್ರಾರಂಭಿಸಿ, ಪಲ್ಲವಿ ಜೊತೆಗೆ ಏಕಾಂತದಲ್ಲಿ ಇರುತ್ತಿದ್ದ. ಇವರಿಬ್ಬರ ಅಕ್ರಮ ಸಂಬಂಧ ಶಶಿಕುಮಾರ್ ಗಮನಕ್ಕೆ ಬರುತ್ತಿದ್ದಂತೆ, ಅನೇಕ ಬಾರಿ ಎಚ್ಚರಿಕೆ ನೀಡಿದ್ದ.
ಲೋಹಿತ್ ನಗರದ ಮನೆಯಲ್ಲಿ ಶುಕ್ರವಾರ ದಿನಗಳ ಹಿಂದೆ ದೇವರ ಕಾರ್ಯದ ಹಬ್ಬವನ್ನ ಮಾಡಿದ್ದಾರೆ. ಅಂದು ಸಂಜೆ ಪತ್ನಿ ಪಲ್ಲವಿ, ಸತೀಶ್ ಹಾಗೂ ಕುಟುಂಬಸ್ಥರ ಜೊತೆ ಪಾರ್ಟಿ ಮಾಡಿ, ಕುಣಿದು ಕುಪ್ಪಳಿಸಿದ್ದಾರೆ. ಅಂದು ರಾತ್ರಿ ಪಲ್ಲವಿ ಕರೆ ಮಾಡಿ ಪತಿ ಶಶಿಕುಮಾರ್ ಮೃತಪಟ್ಟಿರುವ ವಿಚಾರ ತಿಳಿಸಿದ್ದಾಳೆ.
ಒಮ್ಮೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತ ಹೇಳಿದ್ದ ಪಲ್ಲವಿ, ಮತ್ತೊಮ್ಮೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದ್ವಂದ್ವ ಹೇಳಿಕೆ ನೀಡಿದ್ದಾಳೆ. ಅಷ್ಟೇ ಅಲ್ಲದೆ ಯಾವುದೇ ಪ್ರಕರಣ ದಾಖಲಿಸಿದಂತೆ ಹಾಗೂ ಶಶಿಕುಮಾರ್ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸದಂತೆ ಸೇರಿದ್ದ ಜನರಿಗೆ ಕೇಳಿಕೊಂಡಿದ್ದಾಳೆ. ಹೀಗಾಗಿ ಪಲ್ಲವಿ ಮಾತಿನಂತೆ ಶಶಿಕುಮಾರ್ ಅಂತ್ಯಕ್ರಿಯೆ ಮಾಡಲಾಗಿದೆ.
ಪಲ್ಲವಿ ಹಾಗೂ ಸತೀಶ್ ಮೇಲೆ ಶಂಕೆ ವ್ಯಕ್ತಪಡಿಸಿರುವ ಶಶಿಕುಮಾರ್ ಕುಟುಂಬಸ್ಥರು ಈಗ ನೆಲಮಂಗಲ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಶಿಕುಮಾರ್ ಮೃತದೇಹವನ್ನು ಹೊರ ತೆಗೆದು, ಮರಣೋತ್ತರ ಪರೀಕ್ಷೆ ಒಳಪಡಿಸಿ, ತನಿಖೆ ನಡೆಸಬೇಕು ಎಂದು ಒತ್ತಾಯಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv