ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ರವೀಂದ್ರರವರು ಇಂದು ಹಲವು ಇಲಾಖೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆ ಸೇರಿದಂತೆ ನಾಡ ಕಚೇರಿಗೆ ತೆರಳಿದ ಜಿಲ್ಲಾಧಿಕಾರಿ ಜನಸ್ನೇಹಿ ವ್ಯವಸ್ಥೆಗೆ ಒತ್ತು ನೀಡಿದರು. ಸರ್ಕಾರಿ ಶಾಲೆಯಲ್ಲಿ ನಡೆಯುತ್ತಿದ್ದ ಮಕ್ಕಳ ಹಬ್ಬದಲ್ಲಿ ಭಾಗವಹಿಸಿ, ಮಕ್ಕಳೊಂದಿಗೆ ಮಕ್ಕಳಾಗಿ ತಮ್ಮ ಬಾಲ್ಯದ ಜೀವನವನ್ನ ಮೆಲಕುಹಾಕಿದ್ದಾರೆ.
ಶಾಲೆಯ ಬಿಸಿಯೂಟದ ಸ್ವಚ್ಛತೆ ಆಹಾರದ ಗುಣಮಟ್ಟವನ್ನ ವೀಕ್ಷಿಸಿ, ಮಕ್ಕಳಿಗೆ ತಯಾರು ಮಾಡಿದ್ದ ಕೇಸರಿಬಾತ್ ಸವಿದರು. ನಂತರ ಆಡಳಿತ ವ್ಯವಸ್ಥೆ ಚುರುಕುಮುಟ್ಟಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ನಿಡವಂದ ಗ್ರಾಮಕ್ಕೆ ತೆರಳಿ ನೀಲಗಿರಿ ತೆರವಾದ ಜಮೀನುಗಳ ಕೃಷಿ ಚಟುವಟಿಕೆ ವೀಕ್ಷಿಸಿ ರೈತರೊಂದಿಗೆ ಕೃಷಿ ಚಟುವಟಿಕೆಯ ಬಗ್ಗೆ ಮಾಹಿತಿಯನ್ನ ತಿಳಿದು ಸರ್ಕಾರ ಹಾಗೂ ಇಲಾಖೆಯಿಂದ ಬರುವಂತಹ ಸವಲತ್ತುಗಳನ್ನ ಪಡೆಯುವಂತೆ ರೈತರಿಗೆ ವಿವರಿಸಿದ್ದಾರೆ.
ಆಡಳಿತದ ಒತ್ತಡದ ಜಂಜಾಟದ ನಡುವೆ ಜಿಲ್ಲಾಧಿಕಾರಿ ರವೀಂದ್ರ ರವರ ಜನಸ್ನೇಹಿ ಜಿಲ್ಲಾಧಿಕಾರಿಗಳ ಆಡಳಿತ ವ್ಯವಸ್ಥೆಗೆ ನೆಲಮಂಗಲ ತಾಲೂಕಿನ ಎಲ್ಲೆಡೆ ಜನರ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.