ಅಕ್ಕಪಕ್ಕದ ಮನೆಗಳಿಗೆ ಚಿಲಕ ಹಾಕಿ, ಪ್ರೀ ಪ್ಲ್ಯಾನ್ಡ್‌ ದರೋಡೆ – ಬೆಚ್ಚಿಬಿದ್ದ ರಾಯಚೂರು ಜನ

Public TV
1 Min Read
Raichur Robbery

ರಾಯಚೂರು: ಖತರ್ನಾಕ್ ಗ್ಯಾಂಗ್‌ನಿಂದ ಸಿನಿಮೀಯ ರೀತಿಯಲ್ಲಿ ಬೆಚ್ಚಿಬೀಳಿಸುವ ದರೋಡೆ ಪ್ರಕರಣವೊಂದು (Robbery Case) ಜಿಲ್ಲೆಯ ಲಕ್ಷ್ಮಿನರಸಿಂಹ ಲೇಔಟ್‌ನಲ್ಲಿ ನಡೆದಿದೆ.

ಮೂರು ಜನರ ಖತರ್ನಾಕ್ ಗ್ಯಾಂಗ್‌ನಿಂದ ಪ್ರೀ ಪ್ಲ್ಯಾನ್ಡ್‌ ದರೋಡೆ ನಡೆದಿದ್ದು, ಜಿಲ್ಲೆಯ ಜನರನ್ನೇ ಬೆಚ್ಚಿಬೀಳಿಸಿದೆ. ಬಸನಗೌಡ ಎಂಬುವವರ ಮನೆ ಬಾಗಿಲು ಮುರಿದು ಖದೀಮರು ದರೋಡೆ ಮಾಡಿದ್ದಾರೆ.ಇದನ್ನೂ ಓದಿ: Suicide Pod; ಒಂದು ಬಟನ್‌ ಒತ್ತಿದರೆ ಸಾಕು ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದು!

ದರೋಡೆಗೂ ಮುನ್ನ ಬೀದಿ ದೀಪಗಳನ್ನು ಆರಿಸಿ, ಅಕ್ಕಪಕ್ಕದ ಮನೆಗಳ ಚಿಲಕ ಹಾಕಿ ಪೂರ್ವಯೋಜನೆಯೊಂದಿಗೆ ದರೋಡೆ ಮಾಡಿದ್ದಾರೆ. ಮನೆ ಬಾಗಿಲು ಮುರಿದು ಒಳನುಗ್ಗಿದ್ದಾರೆ. ಮನೆಯವರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 220 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 2 ಲಕ್ಷ ನಗದು ಹಣವನ್ನು ದೋಚಿಕೊಂಡು ಹೋಗಿದ್ದಾರೆ.

ಮೂರು ಜನರು ಕಪ್ಪು ಬಟ್ಟೆ ಧರಿಸಿಕೊಂಡು, ಕೈಗೆ ಗ್ಲೌಸ್, ಮಂಕಿ ಕ್ಯಾಪ್ ಹಾಕಿ ಮನೆಗೆ ನುಗ್ಗಿದ್ದಾರೆ. ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಬಾರದ ಹಾಗೆ ಪ್ಲ್ಯಾನ್‌ ಮಾಡಿ ಮನೆಗಳಿಗೆ ಬೀಗ ಹಾಕಿದ್ದಾರೆ. ದರೋಡೆಕೋರರ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಎರಡು ದಿನಗಳಿಂದಲೂ ರಾತ್ರಿ ವೇಳೆ ಬೀದಿ ದೀಪಗಳು ಬಂದ್ ಆಗುತ್ತಿರುವುದನ್ನು ಬಡಾವಣೆ ಜನ ಗಮನಿಸಿದ್ದಾರೆ. ಬಡಾವಣೆ ಜನರ ಚಲನವಲನವನ್ನು ಅರಿತ ಖತರ್ನಾಕ್ ಗ್ಯಾಂಗ್ ಕೃತ್ಯ ಎಸಗಿದೆ. ಈ ಭಯಾನಕ ದರೋಡೆ ಪ್ರಕರಣದಿಂದ ಜನ ಬೆಚ್ಚಿಬಿದ್ದಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ಸ್ಥಳಕ್ಕೆ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಭೇಟಿ ನೀಡಿದ್ದು, ಸದ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ.ಇದನ್ನೂ ಓದಿ: ನಾಗಮಂಗಲದ ಕೋಮು ಗಲಭೆಗೆ ಕೇರಳ ಲಿಂಕ್ – ಕೇರಳ ಮುಸ್ಲಿಮರ ಕೈವಾಡ ಇದ್ಯಾ? – ವಿಶ್ವ ಹಿಂದೂ ಪರಿಷತ್‌ ಆರೋಪ ಏನು?

Share This Article