-ದೀನ್ ದಯಾಳು ಉಪಾಧ್ಯಾಯ ಪ್ರತಿಮೆಯನ್ನ ಹಾಗೆ ಬಿಟ್ಟಿದ್ದಕ್ಕೆ ಕೈ ಆಕ್ರೋಶ
ಲಕ್ನೋ: ಉತ್ತರ ಪ್ರದೇಶದಲ್ಲಿ 2019ರ ಜನವರಿಯಲ್ಲಿ ಕುಂಭಮೇಳ ನಡೆಯಲಿದೆ. ಇದರ ಸಿದ್ಧತೆಗಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರವು ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡಿದ್ದು, ಇದಕ್ಕೆ ಕಾಂಗ್ರೆಸ್ ಭಾರೀ ವಿರೋಧ ವ್ಯಕ್ತಪಡಿಸಿದೆ.
ಅಲಹಾಬಾದ್ನ ಬಲ್ಸಾನ್ ಚೌರಾಹ ಪ್ರದೇಶದಲ್ಲಿ ರಸ್ತೆ ಮಧ್ಯದಲ್ಲಿ ನೆಹರು ಪ್ರತಿಮೆಯನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ ನಡೆಯುವ ಕುಂಭ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ. ಹೀಗಾಗಿ ರಸ್ತೆಗಳ ಅಗಲೀಕರಣಕ್ಕೆ ಸರ್ಕಾರವು ಮುಂದಾಗಿದೆ. ಹೀಗಾಗಿ ರಸ್ತೆ ಮಧ್ಯದಲ್ಲಿರುವ ನೆಹರು ಅವರ ಪ್ರತಿಮೆಯನ್ನು ಪಕ್ಕದ ಉದ್ಯಾನಕ್ಕೆ ಸ್ಥಳಾಂತರಿಸಿದೆ.
ಪ್ರತಿಮೆಯನ್ನು ಸ್ಥಳಾಂತರ ಮಾಡುವ ಮೂಲಕ ಭಾರತದ ಪ್ರಥಮ ಪ್ರಧಾನಿ ನೆಹರು ಅವರಿಗೆ ಯೋಗಿ ಆದಿತ್ಯನಾಥ್ ಸರ್ಕಾರವು ಅವಮಾನ ಮಾಡಿದೆ. ನೆಹರು ತತ್ವಾದರ್ಶಗಳಿಗೆ ಅವಮಾನ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.
ಗುರುವಾರ ಸ್ವಜನ ಪಕ್ಷ ಹಾಗೂ ಕಾಂಗ್ರೆಸ್ಸಿಗರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದರು. ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡುತ್ತಿದ್ದ ಕ್ರೇನ್ ತಡೆದು, ಕೆಲ ಹೊತ್ತು ಯೋಗಿ ಆದಿತ್ಯನಾಥ್ ವಿರುದ್ಧ ಘೋಷನೆ ಕೂಗಿದರು. ‘ಇದೇ ರಸ್ತೆಯಲ್ಲಿರುವ ದೀನ್ ದಯಾಳ್ ಉಪಾಧ್ಯಾಯ ಪ್ರತಿಮೆಯನ್ನು ಹಾಗೆ ಬಿಟ್ಟು, ಕೇವಲ ನೆಹರು ಪ್ರತಿಮೆಯನ್ನು ಏಕೆ ಸ್ಥಳಾಂತರ ಮಾಡುತ್ತಿರುವಿರಿ’ ಎಂದು ಪ್ರತಿಭಟನೆ ನಿರತರು ಪ್ರಶ್ನಿಸಿದ್ದಾರೆ.
ರಸ್ತೆ ಅಗಲೀಕರಣಕ್ಕೆ ಹಾಗೂ ನಗರವನ್ನು ಸುಂದರವಾಗಿಸಲು ನೆಹರು ಪ್ರತಿಮೆಯನ್ನು ಸ್ಥಳಾಂತರ ಮಾಡಲಾಗಿದೆ ಎಂದು ಅಧಿಕಾರಿಗಳು ಉತ್ತರ ಕೊಟ್ಟಿದ್ದಾರೆ. ಆದರೆ ದೀನ್ ದಯಾಳು ಉಪಾಧ್ಯಾಯ ಪ್ರತಿಮೆಯನ್ನು ಏಕೆ ಹಾಗೆ ಬಿಡಲಾಗಿದೆ ಎನ್ನುವುದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv