ಹಾವೇರಿ: ಇಂದು ಸಿಎಂ ಯಡಿಯೂರಪ್ಪ ಅವರ ಬಳಿ ಶಾಸಕ ನೆಹರು ಓಲೇಕಾರ ಅವರು ತಮಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ನೆಹರು ಓಲೇಕಾರ ಅವರು ಸಿಎಂಗೆ ಮನವಿ ಸಲ್ಲಿಸಿದ್ದಾರೆ.
3 ಬಾರಿ ಶಾಸಕನಾಗಿ, 2 ಬಾರಿ ಆಯೋಗದ ಅಧ್ಯಕ್ಷನಾಗಿ ಆಡಳಿತದ ಅನುಭವ ಹೊಂದಿರುವ ನನಗೆ ಈ ಬಾರಿ ಅವಕಾಶ ಕಲ್ಪಿಸಿಕೊಡಬೇಕೆಂದು ನೆಹರು ಓಲೇಕಾರ ಸಿಎಂ ಬಳಿ ವಿನಂತಿಸಿದರು.
ಈ ಬಗ್ಗೆ ಮಾತನಾಡಿದ ಅವರು, ನಾಡಿನ ಸಮಸ್ತ ಛಲವಾದಿ ಸಮಾಜದ ಪರವಾಗಿ ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ. ಅವಕಾಶ ಸಿಗದಿದ್ದರೆ ಯಡಿಯೂರಪ್ಪನವರ ಬಲಗೈ ಬಂಟನಾಗಿ, ನನ್ನ ಹಾವೇರಿ ಮತ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಯಾವುದೇ ಭಿನ್ನಮತ ಹಾಗೂ ರಾಜೀನಾಮೆ ನೀಡಿ ಬಿಎಸ್ವೈ ಸರ್ಕಾರಕ್ಕೆ ಮತ್ತು ಅವರ ಗೌರವಕ್ಕೆ ಚ್ಯುತಿ ತರುವಂತ ಕಾರ್ಯಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಇಂದು ನೆಹರು ಓಲೇಕಾರ ಅವರ ಅಭಿಮಾನಿಗಳು ಸೇರಿದಂತೆ ಹಲವು ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿದರು.