ತುಮಕೂರು: ಪ್ರಸವ ವೇಳೆ ಅನಾಥ ಬಾಣಂತಿ ಹಾಗೂ ಅವಳಿ ಶಿಶುಗಳು (twin babies) ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ (Tumakuru) ನಡೆದಿದೆ. ಬಾಣಂತಿ ಹಾಗೂ ಅವಳಿ ಮಕ್ಕಳ ಸಾವಿಗೆ ಜಿಲ್ಲಾಸ್ಪತ್ರೆಯ (Hospital) ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.
ಭಾರತೀನಗರದ ಅಭಯ ಆಂಜನೇಯ ದೇವಸ್ಥಾನದ ಬಳಿ ವಾಸವಿದ್ದ ತುಂಬು ಗರ್ಭಿಣಿ ಕಸ್ತೂರಿ (30) ಬುಧವಾರ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಆದರೆ ತಾಯಿಗೆ ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಕಸ್ತೂರಿಯವರನ್ನು ವೈದ್ಯಕೀಯ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಳ್ಳದೇ, ವಾಪಸ್ ಕಳುಹಿಸಿದ್ದಾರೆ.
ಇಂದು ಬೆಳಗ್ಗೆ ಕಸ್ತೂರಿಗೆ ಮನೆಯಲ್ಲಿಯೇ ಹೆರಿಗೆ ಆಗಿದೆ. ಆದರೆ ಸೂಕ್ತ ಚಿಕಿತ್ಸೆ ಸಿಗದೇ ಅವಳಿ ಶಿಶುಗಳ ಜೊತೆಗೆ ಬಾಣಂತಿಯೂ ಮೃತಪಟ್ಟಿದ್ದಾರೆ. ಕಸ್ತೂರಿ ಮೂಲತಃ ತಮಿಳುನಾಡಿನವರಾಗಿದ್ದು, ಕಳೆದ 1 ತಿಂಗಳಿನಿಂದ ಭಾರತಿ ನಗರದಲ್ಲಿ ವಾಸವಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪೊಲೀಸ್ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ – 2 ವರ್ಷ ವಯೋಮಿತಿ ಸಡಿಲ
ಇದೀಗ ಬಾಣಂತಿ ಹಾಗೂ ಅವಳಿ ಮಕ್ಕಳ ಸಾವಿಗೆ ಕಾರಣವಾಗಿರುವ ಆರೋಗ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ತಪ್ಪಿತಸ್ಥರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊನ್ನಾಳಿ ಚಂದ್ರು ಸಾವಿನ ಸುತ್ತ 5 ಅನುಮಾನ
ಘಟನಾ ಸ್ಥಳಕ್ಕೆ ಡಿ.ಹೆಚ್.ಒ ಡಾ. ಮಂಜುನಾಥ್ ಹಾಗೂ ಡಾ. ವೀಣಾ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಮಂಜುನಾಥ್, ಜಿಲ್ಲಾ ಆಸ್ಪತ್ರೆ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿರುವುದು ಕಂಡುಬಂದಿರುವುದರಿಂದ ಆ ವೇಳೆ ಕರ್ತವ್ಯದಲ್ಲಿದ್ದ ಡಾ.ಉಷಾ ಸೇರಿ ನರ್ಸ್ಗಳನ್ನು ಅಮಾನತುಗೊಳಿಸಲಾಗುವುದು. ತುರ್ತು ಸಂದರ್ಭದಲ್ಲಿ ದಾಖಲಾತಿ ಕೇಳುವ ಅಗತ್ಯ ಇಲ್ಲ. ಯಾವುದೇ ಮುಲಾಜಿಲ್ಲದೆ ಅವರನ್ನು ಅಮಾನತುಗೊಳಿಸಲಾಗುವುದು ಎಂದಿದ್ದಾರೆ.