ಧಾರವಾಡ: ಬದುಕಿದೆಯಾ ಬಡ ಜೀವ ಎಂಬಂತೆ, ಧಾರವಾಡದ ಕಟ್ಟಡ ದುರಂತದಲ್ಲಿ ಅವಶೇಷಗಳಡಿ ಸಿಲುಕಿದ್ದ ಸಾಕಿದ ಶ್ವಾನವೊಂದು ಬದುಕಿ ಬಂದಿದೆ. ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ನಾಯಿಯನ್ನು ರಕ್ಷಣೆ ಮಾಡಲಾಗಿದೆ.
ಕಟ್ಟಡದ ನೆಲ ಮಹಡಿಯಲ್ಲಿ ಹೋಟೆಲ್ ಮಾಲೀಕರೊಬ್ಬರು ಸಾಕಿದ ನಾಯಿ ರೋಬಿ ಕೊನೆಗೂ ಬದುಕಿ ಬಂದಿದೆ. ಎನ್ಡಿಆರ್ಎಫ್ ತಂಡದ ಜೊತೆ ಬಂದಿದ್ದ ಅರ್ಜುನ್ ನಾಯಿ ನೆಲ ಮಹಡಿಯಲ್ಲಿ ಸಿಲುಕಿದ್ದ ಸಾಕು ನಾಯಿಯನ್ನು ಪತ್ತೆ ಹಚ್ಚಿದೆ. ಎನ್ಡಿಆರ್ಎಫ್ ತಂಡದವರು ನಾಯಿಯನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ನಂತರ ನಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಧಾರವಾಡದಲ್ಲಿ ಕಟ್ಟಡ ಕುಸಿತ – ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಸದ್ಯಕ್ಕೆ ಧಾರವಾಡ ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಈವರೆಗೂ ರಕ್ಷಣಾ ಕಾರ್ಯದಲ್ಲಿ 54 ಜನರನ್ನು ರಕ್ಷಣೆ ಮಾಡಲಾಗಿದೆ. ಇನ್ನೂ ಎರಡು ದಿನಗಳ ಕಾಲ ಕಾರ್ಯಾಚರಣೆ ನೆಡೆಯುವ ಸಾಧ್ಯತೆ ಇದೆ. ಈಗಾಗಲೇ ಘಾಜಿಯಾಬಾದ್ NDRF ನ ಮತ್ತೊಂದು ತಂಡದ 78 ಸಿಬ್ಬಂದಿ ಧಾರವಾಡಕ್ಕೆ ಆಗಮಿಸಿದ್ದಾರೆ.