ಮುಂಬೈ: ಕಾನೂನಿಗಿಂತ ಯಾರು ಮೇಲಲ್ಲ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಖಲಿಸ್ತಾನಿಗಳಿಗೆ ಹಾಗೂ ಸಿಖ್ ಸಮುದಾಯವನ್ನು ಉಗ್ರರಿಗೆ ಹೋಲಿಸಿ ವಿವಾದಕ್ಕೆ ಕಾರಣವಾಗಿರುವ ಕಂಗನಾ ವಿರುದ್ಧ ಸಚಿವ ಮಲಿಕ್ ಗರಂ ಆಗಿದ್ದಾರೆ. ಅಲ್ಲದೇ ಕಂಗನಾ ಅವರಿಗೆ ಒದಗಿಸಿರುವ ಭದ್ರತೆ ಕುರಿತು ಟೀಕಾಪ್ರಹಾರ ನಡೆಸಿದ್ದಾರೆ. ಇದನ್ನೂ ಓದಿ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ದಂಪತಿಗೆ ಹೆಣ್ಣು ಮಗು ಜನನ
ಕಂಗನಾ ಅವರು ಎಲ್ಲರನ್ನೂ ನಿಂದಿಸುತ್ತಿದ್ದಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು ಅವಮಾನಿಸಿದ್ದಾರೆ. 1947ರಲ್ಲಿ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ ಎಂದಿದ್ದಾರೆ. ಅಲ್ಲದೇ ಹಲವು ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಚಿವರು ಟೀಕಿಸಿದ್ದಾರೆ.
ಕಂಗನಾ ಅವರ ಹೇಳಿಕೆಗಳು ಸ್ವೀಕಾರಾರ್ಹವಲ್ಲ. ಕಾನೂನಿಗಿಂತ ಯಾರೂ ಮಿಗಿಲಲ್ಲ. ಕಂಗನಾ ಅವರಿಗೆ ಝಡ್ ಶ್ರೇಣಿಯ ಭದ್ರತೆ ಕಲ್ಪಿಸಿರಬಹುದು. ಭದ್ರತೆಯಿಂದ ಕಾನೂನಿನ ರಕ್ಷಣೆ ಸಾಧ್ಯವಿಲ್ಲ. ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಮೊದಲ ಮೊಹಬ್ಬತ್ ರಾಹುಲ್ ದ್ರಾವಿಡ್ ಎಂದ ಬಾಲಿವುಡ್ ನಟಿ
ಭಾರತದ ಸ್ವಾತಂತ್ರ್ಯ, ಮಹಾತ್ಮ ಗಾಂಧಿ ಅವರ ಅಹಿಂಸಾ ಮಾರ್ಗ, ರೈತರ ಪ್ರತಿಭಟನೆ, ಸಿಖ್ ಸಮುದಾಯದವರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ನಟಿ ಕಂಗನಾ ರಣಾವತ್ ಅವರು ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.