ರಾಯಪುರ: ಛತ್ತಿಸ್ಗಢದ ಕಾಡಿನಲ್ಲಿ ಸೈನಿಕರ ದಾಳಿಗೆ ತತ್ತರಿಸಿ ಹೋಗಿರುವ ನಕ್ಸಲಿಯರು ಈಗ ನಕಲಿ ಬಂದೂಕು ಹಾಗೂ ಗೊಂಬೆ ಬಳಸಿ ಭದ್ರತಾ ಪಡೆಯ ದಾರಿಯನ್ನು ತಪ್ಪಿಸಲು ಮುಂದಾಗಿದ್ದಾರೆ.
ಛತ್ತಿಸ್ಗಢದ ಸುತ್ತಮುತ್ತ ನಕ್ಸಲಿಯರ ಹಾವಳಿ ಹೆಚ್ಚಾಗಿದೆ. ಅದರಲ್ಲೂ ಇಲ್ಲಿನ ಸುಕ್ಮಾ ಜಿಲ್ಲೆಯನ್ನು ನಕ್ಸಲ್ ಪೀಡಿತ ಪ್ರದೇಶವೆಂದು ಘೋಷಿಸಲಾಗಿದೆ. ಈಗ ಈ ಪ್ರದೇಶದ ಜನರಲ್ಲಿ ಭಯ ಹುಟ್ಟುಸಿ, ಭದ್ರತಾ ಸಿಬ್ಬಂದಿಯ ದಾರಿ ತಪ್ಪಿಸಲು ನಕ್ಸಲಿಯರು ಹೊಸ ಪ್ಲಾನ್ ಮಾಡಿದ್ದಾರೆ.
ಕಾಡಿನಲ್ಲಿ ಮರಗಳ ಹಿಂದೆ ಮನುಷ್ಯರು ನಿಂತಿರುವ ಹಾಗೆ ಬೆದರು ಗೊಂಬೆಗಳನ್ನು ನಿಲ್ಲಿಸಿ ಅದರ ಕೈಯಲ್ಲಿ ನಕಲಿ ಬಂದೂಕನ್ನು ಇಟ್ಟು ಮರಗಳಿಗೆ ಕಟ್ಟಿದ್ದಾರೆ. ಈ ದಾರಿಯಲ್ಲಿ ಜನರು ಓಡಾಡುವವಾಗ ಗೊಂಬೆಗಳನ್ನು ಕಂಡು ಮರದ ಹಿಂದೆ ನಕ್ಸಲಿಯರೇ ನಿಂತಿದ್ದಾರೆ ಎಂದು ಭಯಪಡುತ್ತಿದ್ದಾರೆ.
ಈ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಕಾಡಿನಲ್ಲಿ ಇರುವುದು ನಕ್ಸಲಿಯರಲ್ಲ, ಬದಲಿಗೆ ಜನರನ್ನು ಹೆದರಿಸಲು ನಕ್ಸಲಿಯರು ಮಾಡಿರುವ ಹೊಸ ಪ್ಲಾನ್ ಎನ್ನುವುದು ಬೆಳಕಿಗೆ ಬಂದಿದೆ.
ಈ ಪ್ರದೇಶದಲ್ಲಿ ಒಟ್ಟು ಮೂರು ನಕಲಿ ಬಂದೂಕು ಹಿಡಿದು ನಿಂತ ಬೆದರು ಗೊಂಬೆಗಳನ್ನು ಭದ್ರತಾ ಸಿಬ್ಬಂದಿ ಪತ್ತೆ ಮಾಡಿದ್ದಾರೆ. ಜನರಲ್ಲಿ ನಕ್ಸಲಿಯರ ಮೇಲೆ ಇರುವ ಭಯವನ್ನು ಹೆಚ್ಚಿಸಲು ಹಾಗೂ ಭದ್ರತಾ ಪಡೆಯ ದಾರಿ ತಪ್ಪಿಸಲು ನಕ್ಸಲಿಯರು ಈ ರೀತಿ ತಂತ್ರ ಮಾಡಿದ್ದಾರೆ ಎಂದು ಭದ್ರತಾ ಪಡೆಯ ಅಧಿಕಾರಿ ಧರ್ಮೇಂದ್ರ ಸಿಂಗ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv