ಬೆಂಗಳೂರು: ಇದು ನಕ್ಸಲರ ಶರಣಾಗತಿ ಅಲ್ಲ. ಕಾಡು ನಕ್ಸಲರನ್ನು ನಾಡು ನಕ್ಸಲರನ್ನಾಗಿ ಮಾಡುವ ಪ್ಯಾಕೇಜ್ ಇದು ಎಂದು ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮೇಶ್ವರ ಕಫೆಗೆ ಬಾಂಬ್ ಇಟ್ಟವರನ್ನು ಹಾಗೂ ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಟ್ಟವರನ್ನ ಶರಣಾಗತಿ ಆದರೆ ಬಿಡ್ತಾರಾ? ಶರಣಾಗತಿಗೂ ಮೊದಲೇ ಎ, ಬಿ,ಸಿ ಎಂದು ಪ್ಯಾಕೇಜ್ ಘೋಷಣೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯನವರ (Siddaramaiah) ಮನೆಯಲ್ಲೇ ಶರಣಾಗತಿ ಆಗುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ದುರಂತ ಯಾವುದು ಇಲ್ಲ ಎಂದು ಹೇಳಿದರು.
ನಕ್ಸಲ್ ಶರಣಾಗತಿ ಮಾಡುವಂತಹ ಘಟನೆ ಅತ್ಯಂತ ಆತಂಕಕಾರಿ. ನಕ್ಸಲ್ ಅವರನ್ನು ಶರಣಾಗತಿ ಮಾಡಿಸುವ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಬೇಕು. ಮುಂದಿನ ದಿನಗಳಲ್ಲಿ ನಾಗರಿಕ ಸಮಾಜ ಅತ್ಯಂತ ಅಪಾಯಕಾರಿಗೆ ತಲುಪಲಿದೆ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಅಲ್ಲ, ಇಂದು ಸಿಎಂ ಸಮ್ಮುಖದಲ್ಲೇ ಶರಣಾಗಲಿದ್ದಾರೆ ನಕ್ಸಲರು
ನಕ್ಸಲ್ ಚಿಂತನೆಗೆ ಬೆಂಬಲ ಸಿಗದೇ ಇದ್ದಾಗ ಸಿದ್ದರಾಮಯ್ಯ ಸರ್ಕಾರ ಪ್ಯಾಕೇಜ್ ಆಸೆಯ ಚಿಗುರು ಹೊರಡಿಸಿದೆ. ಹಣವನ್ನು ನೀಡಿ ಶರಣಾಗತಿ ಮಾಡಿಸುವುದನ್ನು ನಾವು ವಿರೋಧಿಸುತ್ತೇವೆ. ಬಡವರಿಗೆ ನೆರವು ಕೊಡದೇ ಬಂದೂಕುಗಳು ಹಿಡಿದವರಿಗೆ ನೆರವು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಹಲವು ವರ್ಷಗಳಿಂದ ನಕ್ಸಲ್ ವಿರುದ್ಧ ಹೋರಾಡಿದ ನಕ್ಸಲ್ ನಿಗ್ರಹ ಪಡೆಯ ನೈತಿಕ ಸ್ಥೈರ್ಯ ಕಳೆದುಕೊಳ್ಳುವ ಸಂದರ್ಭ ಇದು. ವಿಕ್ರಮ್ ಗೌಡ (Vikram Gowda) ಎನ್ಕೌಂಟರ್ ಆಗುತ್ತಿದ್ದಂತೆ ತನಿಖೆ ಆಗಬೇಕು ಅಂತಾರೆ. ಶರಣಾಗತಿ ಆಗುವುದಾದರೆ ನ್ಯಾಯಾಲಯದಲ್ಲಿ ಶರಣಾಗಲಿ. ಐದು ವರ್ಷಗಳಲ್ಲಿ ಬಿಡುಗಡೆ ಆಗಿರುವ ನಕ್ಸಲರ ಚಟುವಟಿಕೆಗಳನ್ನು ಬಿಡುಗಡೆ ಮಾಡಿ ಎಂದು ಸುನಿಲ್ ಕುಮಾರ್ ಗೃಹ ಸಚಿವರಿಗೆ ಮನವಿ ಮಾಡಿದರು.
ಇವರು ನಗರಕ್ಕೆ ಬಂದ ನಂತರ ಕಾಡಿಗೆ ಕಳುಹಿಸಿ ಕೊಡುವ ಕೆಲಸ ಆಗಲಿದೆ. ಶಾಂತಿಗಾಗಿ ನಾಗರೀಕ ವೇದಿಕೆ ಮುಂದೆ ಶರಣಾಗತಿ ಆಗುವುದು ಬೇಡ. ನ್ಯಾಯಾಲಯದ ಮುಂದೆ ಶರಣಾಗಲಿ ಎಂದರು.