ಲಾಹೋರ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರು 2008ರ ಮುಂಬೈ ಉಗ್ರ ದಾಳಿಯಲ್ಲಿ ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಪಾತ್ರ ಇದೆ ಎಂದು ಬಹಿರಂಗವಾಗಿ ಹೇಳಿದ್ದಾರೆ.
ಪಾಕಿಸ್ತಾನದ ಡಾನ್ ಪತ್ರಿಕೆ ಜತೆ ಮಾತನಾಡಿರುವ ಅವರು, ಪಾಕಿಸ್ತಾನದಲ್ಲಿ ಭಯೋತ್ಪಾದಕ ಸಂಘಟನೆಗಳು ಸಕ್ರಿಯವಾಗಿವೆ. ಅವುಗಳು ಸರ್ಕಾರೇತರ ಶಕ್ತಿಗಳಾಗಿವೆ. ಗಡಿಯನ್ನು ದಾಟಿ ಮುಂಬೈಯಲ್ಲಿ 150ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಲು ಅವಕಾಶ ಮಾಡಿಕೊಡಬೇಕೆ ಎಂದು ಪ್ರಶ್ನಿಸಿದ್ದಾರೆ.
10 ಜನ ಲಷ್ಕರ್-ಇ-ತೊಯ್ಬಾ ಉಗ್ರರು ನವೆಂಬರ್ 26, 2008 ರಿಂದ ನವೆಂಬರ್ 29 ರವರೆಗೆ ಮುಂಬೈಯಲ್ಲಿ ಸಂಘಟಿತ ಶೂಟಿಂಗ್ ಮತ್ತು ಬಾಂಬ್ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
2008 ನವೆಂಬರ್ 26 ರಂದು ಆಗಿದ್ದೇನು?
ನವೆಂಬರ್ 23 ರಂದು 10 ಜನ ಉಗ್ರರು ಕರಾಚಿಯಿಂದ ಅರೇಬಿಯನ್ ಸಮುದ್ರದ ಮೂಲಕ ದೋಣಿಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಮಾರ್ಗದ ಮಧ್ಯೆ ಭಾರತದ ಮೀನುಗಾರರ ದೋಣಿಯನ್ನು ಅಪಹರಿಸಿ, 4 ಜನರನ್ನು ಕೊಂದು ದೋಣಿಯ ಕ್ಯಾಪ್ಟನ್ ಅನ್ನು ಭಾರತಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಮುಂಬೈಗೆ 7 ಕಿಮೀ ಇರುವಂತೆ ಕ್ಯಾಪ್ಟನ್ ಅನ್ನು ಕೊಂದುಹಾಕಿ ಮುಂಬೈ ತಲಪುತ್ತಿದ್ದಂತೆ ತಂಡಗಳಾಗಿ ಬೇರೆ ಬೇರೆ ಹಾದಿಯಲ್ಲಿ ನಡೆದಿದ್ದಾರೆ.
ನವೆಂಬರ್ 26 ರಂದು ಮೊಹಮ್ಮದ್ ಅಜ್ಮಲ್ ಕಸಬ್, ಇಸ್ಮಾಯಿಲ್ ಖಾನ್ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮೇಲೆ ದಾಳಿ ಮಾಡಿ 58 ಜನರನ್ನು ಸಾಯಿಸಿದ್ದರು. ನಂತರ ನಾರಿಮನ್ ಹೌಸ್, ತಾಜ್, ಒಬೆರಾಯ್-ಟ್ರೈಡೆಂಟ್ ಹೋಟೆಲ್ ಮೇಲೆ ದಾಳಿ ಮಾಡಿ 100ಕ್ಕೂ ಹೆಚ್ಚು ಜನರನ್ನು ಹತ್ಯೆ ಮಾಡಿದ್ದರು.
ಈ ಕೃತ್ಯವನ್ನು ಮಾಡಿರುವವರು ಉಗ್ರರೇ ಅವರಿಗೆ ಪಾಕಿಸ್ತಾನ ಬೆಂಬಲಿಸಿ ನೆಲೆಕೊಟ್ಟಿದೆ ಎಂದು ಭಾರತ ಪದೇ ಪದೇ ದಾಖಲೆ ಸಹಿತ ಆರೋಪ ಮಾಡುತ್ತಲೇ ಬಂದಿತ್ತು.