– ಅಜಂತಾ ಗುಹೆಯ ವರ್ಣಚಿತ್ರದಿಂದ ಪ್ರೇರಣೆ
– ಕೇರಳ ಕುಶಲಕರ್ಮಿಗಳಿಂದ ಸಾಂಪ್ರದಾಯಿಕ ವಿಧಾನ ಬಳಸಿ ನಿರ್ಮಾಣ
– ಪ್ರಾಚೀನ ವ್ಯಾಪಾರ ಮಾರ್ಗ ಗುಜರಾತ್ನಿಂದ ಒಮನ್ಗೆ ಮೊದಲ ಪ್ರಯಾಣಕ್ಕೆ ಸಿದ್ಧತೆ
ಕಾರವಾರದ (Karwar) ನೌಕಾ ನೆಲೆಯಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆಯು (Indian Navy) ಐಎನ್ಎಸ್ವಿ ಕೌಂಡಿನ್ಯ (INSV Kaundinya) ಹೆಸರಿನ ನೇಯ್ದ ಹಡಗನ್ನು ಅನಾವರಣಗೊಳಿಸಿದೆ. ಈ ಹಡಗು 5 ನೇ ಶತಮಾನದ ಹಡಗಿನ ಪ್ರತಿಕೃತಿಯಾಗಿದ್ದು, ಸಂಪೂರ್ಣ ಪ್ರಾಚೀನ ತಂತ್ರಜ್ಞಾನ ಬಳಸಿಕೊಂಡು ನಿರ್ಮಾಣ ಮಾಡಲಾಗಿದೆ.
ಸಂಸ್ಕೃತಿ ಸಚಿವಾಲಯ, ಭಾರತೀಯ ನೌಕಾಪಡೆ ಮತ್ತು ಹೊಡಿ ಇನ್ನೋವೇಶನ್ಸ್ ಸೇರಿ ಈ ಹಡಗನ್ನು ನಿರ್ಮಿಸಿವೆ. ಜುಲೈ 2023 ರಲ್ಲಿ ತ್ರಿಪಕ್ಷೀಯ ಒಪ್ಪಂದದ ಮೂಲಕ ಈ ಯೋಜನೆಯನ್ನು ಪ್ರಾರಂಭಿಸಲಾಗಿತ್ತು. ಸಂಸ್ಕೃತಿ ಸಚಿವಾಲಯವು ಈ ಯೋಜನೆಗೆ ಹಣಕಾಸಿನ ನೆರವನ್ನು ಒದಗಿಸಿದೆ. ಈ ಯೋಜನೆಗೆ ಸುಮಾರು 9 ಕೋಟಿ ರೂ. ವೆಚ್ಚವಾಗಿದೆ. 21 ಮೀಟರ್ ಉದ್ದ ಇರುವ ಈ ಹಡಗು, ನಿರ್ಮಾಣಕ್ಕೆ ಸುಮಾರು 22 ತಿಂಗಳುಗಳು ಹಿಡಿದಿವೆ.
ನೇಯ್ದ ಹಡಗು ಏಕೆ ವಿಶೇಷ?
ಈ ಹಡಗು ಅಜಂತಾ ಗುಹೆಗಳಲ್ಲಿನ ವರ್ಣಚಿತ್ರದಿಂದ (Ajanta Paintings) ಪ್ರೇರಣೆ ಪಡೆದಿದೆ. ಈ ಹಡಗಿನ ನಿರ್ಮಾಣವನ್ನು ಸಂಪೂರ್ಣವಾಗಿ ಸಾಂಪ್ರದಾಯಿಕ ವಿಧಾನದಲ್ಲಿ ತಯಾರಿಸಲಾಗಿದೆ. ನೈಸರ್ಗಿಕ ಕಚ್ಚಾ ವಸ್ತುಗಳನ್ನು ಬಳಸಿ ಕೇರಳದ ಹಡಗು ತಯಾರಕ ಬಾಬು ಶಂಕರನ್ ನೇತೃತ್ವದಲ್ಲಿ ಗೋವಾದಲ್ಲಿ ಇದರ ನಿರ್ಮಾಣವಾಗಿದೆ. ಸಂಪೂರ್ಣ ಮರದ ವಸ್ತುಗಳನ್ನು ಬಳಕೆ ಮಾಡಲಾಗಿದೆ. ಚೌಕಾಕಾರದ ಹಾಯಿಗಳು ಮತ್ತು ಸ್ಟೀರಿಂಗ್ ಹೊಂದಿರುವ ಈ ಹಡಗು ಆಧುನಿಕ ಹಡಗುಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಹಲ್ ಜ್ಯಾಮಿತಿ, ರಿಗ್ಗಿಂಗ್ ಮತ್ತು ಹಾಯಿಗಳನ್ನು ಸಹ ಇದರಲ್ಲಿ ಅಭಿವೃದ್ಧಿಪಡಿಸಲಾಗಿದೆ.
ಹಡಗಿನ ಹೈಡ್ರೊಡೈನಾಮಿಕ್ ಕಾರ್ಯಕ್ಷಮತೆಯ ಮೌಲ್ಯೀಕರಣಕ್ಕೆ ಭಾರತೀಯ ನೌಕಾಪಡೆಯು ಐಐಟಿ ಮದ್ರಾಸ್ನ ಸಾಗರ ಎಂಜಿನಿಯರಿಂಗ್ ವಿಭಾಗ ಪರೀಕ್ಷೆ ನಡೆಸಿದೆ. ಈ ಹಡಗನ್ನು ಪುನರ್ನಿರ್ಮಿಸುವುದು ಭಾರತದ ಪ್ರಾಚೀನ ಕಡಲ ಸಂಪ್ರದಾಯವನ್ನು ಜೀವಂತವಾಗಿಡಲು ಭಾರತೀಯ ನೌಕಾಪಡೆ ಕೈಗೊಂಡ ಮಹತ್ವದ ಪ್ರಯತ್ನವಾಗಿದೆ.
ಸವಾಲಿನ ಕೆಲಸ
ಈ ಯೋಜನೆಯು ಹಲವಾರು ವಿಶಿಷ್ಟ ತಾಂತ್ರಿಕ ಸವಾಲುಗಳನ್ನು ಒಡ್ಡಿತು, ಏಕೆಂದರೆ ಅಂತಹ ಹಡಗುಗಳ ಯಾವುದೇ ನೀಲನಕ್ಷೆಗಳು ಅಥವಾ ಭೌತಿಕ ಅವಶೇಷಗಳು ಈಗ ಲಭ್ಯವಿಲ್ಲ. ವಿನ್ಯಾಸವನ್ನು ಕಲಾತ್ಮಕ ಚಿತ್ರದಿಂದ ಮಾತ್ರ ಅಧ್ಯಯನ ಮಾಡಿ ನಿರ್ಮಿಸಲಾಗಿದೆ. ಆದರೂ, ಹಡಗಿನ ಪ್ರತಿಯೊಂದು ಅಂಶವನ್ನು ಸಮುದ್ರಯಾನಕ್ಕೆ ಸಮತೋಲನವನ್ನು ಸಾಧಿಸುವಂತೆ ಎಚ್ಚರಿಕೆಯಿಂದ ರಚಿಸಲಾಗಿದೆ. ಈ ಮೂಲಕ ಯೋಜನೆಯ ಮೊದಲ ಮತ್ತು ಅತ್ಯಂತ ಕಠಿಣ ಹಂತವು ಈಗ ಪೂರ್ಣಗೊಂಡಿದೆ.
ಮುಂದಿನ ಹಂತವು ಭಾರತೀಯ ನೌಕಾಪಡೆಯು ಪ್ರಾಚೀನ ಸಮುದ್ರ ವ್ಯಾಪಾರ ಮಾರ್ಗಗಳಲ್ಲಿ ಸಂಚಾರ ಕೈಗೊಳ್ಳುವುದಾಗಿದೆ. ಗುಜರಾತ್ನಿಂದ ಒಮನ್ಗೆ ಮೊದಲ ಪ್ರಯಾಣಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಈ ವರ್ಷದ ಕೊನೆಯಲ್ಲಿ ಸಮುದ್ರಯಾನ ಕೈಗೊಳ್ಳಲಾಗುತ್ತದೆ. ಮಸ್ಕತ್ ಮತ್ತು ಇಂಡೋನೇಷ್ಯಾದಂತಹ ಸ್ಥಳಗಳಿಗೆ ಈ ಹಡಗು ಸಂಚರಿಸಲಿದೆ. ಭಾರತದ ಶ್ರೀಮಂತ ಕಡಲ ಪರಂಪರೆಯನ್ನು, ಸಮಕಾಲೀನ ನಾವೀನ್ಯತೆಯನ್ನು ಅಳವಡಿಸಿಕೊಳ್ಳುವುದು ಇದರ ಮೂಲ ಉದ್ದೇಶವಾಗಿದೆ.
ಕಚ್ಚಾವಸ್ತುಗಳು
ಮರದ ಹಲಗೆಗಳು, ತೆಂಗಿನ ಮರದ ನಾರಿನ ಹಗ್ಗವನ್ನು ಬಳಕೆ ಮಾಡಲಾಗಿದೆ. ಸಮುದ್ರದಲ್ಲಿ ಬಾಳಿಕೆ ಬರುವಂತೆ ಹಡಗಿನ ಹಲ್ನ್ನು ಸಾರ್ಡೀನ್ ಎಣ್ಣೆ, ನೈಸರ್ಗಿಕ ರಾಳಗಳು ಹಾಕಿ ಸಂಸ್ಕರಿಸಲಾಗಿದೆ.
ಇದರ ಚೌಕಟ್ಟನ್ನು ತೇಗ ಮತ್ತು ಹಲಸಿನ ಮರದಿಂದ ತಯಾರಿಸಲಾಗಿದ್ದು, ಕೀಲ್ನ್ನು ಗೋವಾದ ರಾಜ್ಯ ಮರವಾದ ಮಟ್ಟಿಯಿಂದ ತಯಾರಿಸಲಾಗಿದೆ. ಪ್ರತಿಯೊಂದು ಹಲಗೆಯನ್ನು ಸಾಂಪ್ರದಾಯಿಕ ಉಗಿ ತಂತ್ರಗಳನ್ನು ಬಳಸಿ ಆಕಾರ ನೀಡಲಾಯಿತು ಮತ್ತು ನಂತರ ನೈಸರ್ಗಿಕ ವಸ್ತುಗಳಿಂದ ಹೊಲಿಯಲಾಗಿದೆ. ಇದೆಲ್ಲವನ್ನು ತೆಂಗಿನ ನಾರು ಬಳಸಿ ಕಟ್ಟಲಾಗಿದೆ. ಮೀನಿನ ಎಣ್ಣೆ ಮತ್ತು ಖುಂಡ್ರಸ್ ರಾಳದ ಮಿಶ್ರಣವನ್ನು ಬಳಸಿ ಕೀಲುಗಳನ್ನು ಮುಚ್ಚಲಾಗಿದೆ.
15 ಸದಸ್ಯರ ಭಾರತೀಯ ನೌಕಾಪಡೆಯ ಸಿಬ್ಬಂದಿ ಈ ಹಡಗನ್ನು ಓಡಿಸಲಿದ್ದಾರೆ. ಕ್ಯಾಪ್ಟನ್ ದಿಲೀಪ್ ದೊಂಡೆ (ನಿವೃತ್ತ) (First Indian To Complete A solo) ಅವರ ಮಾರ್ಗದರ್ಶನದಲ್ಲಿ ಕಾರವಾರದಲ್ಲಿ ತರಬೇತಿ ನಡೆಯಲಿದೆ.