ಬೆಂಗಳೂರು: ನಗರದ ಖ್ಯಾತ ಚಿತ್ರಮಂದಿರ ನವರಂಗ್ ಚಿತ್ರ ಪ್ರದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದ್ದು, ಹೊಸ ರೂಪ ಪಡೆದುಕೊಂಡು ಮತ್ತೆ ಆರಂಭವಾಗಲಿದೆ.
ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ನವರಂಗ್ ಚಿತ್ರ ಮಂದಿರದಲ್ಲಿ ಸದ್ಯ ಚಿತ್ರ ಪ್ರದರ್ಶನ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಮಾತನಾಡಿದ ಮಾಲೀಕ ಕೆಸಿಎನ್ ಮೋಹನ್, ತಾತ್ಕಾಲಿಕವಾಗಿ ಮಾತ್ರ ಚಿತ್ರಮಂದಿರವನ್ನು ಕ್ಲೋಸ್ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಈಗಾಗಲೇ ನಗರದಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಎರಡು, ಮೂರು ಸ್ಕ್ರೀನ್ ಗಳನ್ನು ಹೊಂದಿರುವ ಹಲವು ಮಲ್ಟಿಪ್ಲೆಕ್ಸ್ ಥಿಯೇಟರ್ ಗಳು ನಿರ್ಮಾಣವಾಗಿದೆ. ಹಾಗಾಗಿ ನವರಂಗ ಚಿತ್ರಮಂದಿರವನ್ನು ಕೂಡ ಇದೇ ರೀತಿ ನವೀಕರಣ ಮಾಡಲು ಮಾಲೀಕರು ಮುಂದಾಗಿದ್ದಾರೆ.
ನಗರದಲ್ಲಿ ಇತ್ತೀಚೆಗೆ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಜಾಸ್ತಿ ಆಗುತ್ತಿರುವುರಿಂದ ಜಾಸ್ತಿ ಲಾಭ ಸಿಗುತ್ತಿಲ್ಲ. ಅನಿವಾರ್ಯವಾಗಿ ಚಿತ್ರಮಂದಿರಗಳಲ್ಲಿ ಕೆಲ ಆಧುನಿಕ ಬದಲಾವಣೆಗಳನ್ನು ಮಾಡಬೇಕು. ಚಿತ್ರಮಂದಿರ ನವೀಕರಣ ಮಾಡುತ್ತಿರುವ ವಿಷಯ ತಿಳಿದ ಕೆಲವರು, ಥಿಯೇಟರ್ ಕೆಡವಿ ಶಾಪಿಂಗ್ ಮಾಲ್ ಮಾಡಲು ಸಲಹೆ ನೀಡಿದ್ದರು. ಆದರೆ ಇದು ನಮ್ಮ ತಂದೆಯವರ ಕನಸು. ಹಾಗಾಗಿ ನಾನು ಚಿತ್ರಮಂದಿರ ಕೆಡವದೆ ಹೊಸ ರೂಪ ಪಡೆದುಕೊಂಡು ಮತ್ತೆ ರೀ-ಓಪನ್ ಮಾಡುತ್ತೇನೆ ಎಂದು ಕೆಸಿಎನ್ ಮೋಹನ್ ಪ್ರತಿಕ್ರಿಯಿಸಿದ್ದಾರೆ.
1963ರಲ್ಲಿ ಎಸ್ ನಿಜಲಿಂಗಪ್ಪವರು ಚಿತ್ರಮಂದಿರವನ್ನು ಉದ್ಘಾಟನೆ ಮಾಡಿದ್ದರು. ರಾಜ್ಕುಮಾರ್ ಅವರ `ವೀರ ಕೇಸರಿ’ ಸಿನಿಮಾ ಮೊದಲ ಬಾರಿಗೆ ಬಿಡುಗಡೆಯಾಗಿತ್ತು. ನವರಂಗ ಚಿತ್ರಮಂದಿಕ್ಕೆ ಸುಮಾರು 60 ವರ್ಷಗಳ ಇತಿಹಾಸವನ್ನು ಇದೆ.
ಇತ್ತೀಚೆಗೆ ಈ ಚಿತ್ರಮಂದಿರದಲ್ಲಿ ಯಂಗ್ ರೆಬೆಲ್ ಸ್ಟಾರ್ ನಟ ಅಭಿಷೇಕ್ ನಟನೆಯ ‘ಅಮರ್’ ಸಿನಿಮಾ ಬಿಡುಗಡೆಯಾಗಿತ್ತು. ಡಾ. ರಾಜ್ಕುಮಾರ್ ಕುಟುಂಬ ಎಲ್ಲಾ ಸಿನಿಮಾಗಳು ಈ ಚಿತ್ರಮಂದಿರಲ್ಲಿ ಬಿಡುಗಡೆಯಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ `ಮುಂಗಾರು ಮಳೆ’ ಸಿನಿಮಾ ಚಿತ್ರಮಂದಿರಲ್ಲಿ 25 ವಾರ ಪ್ರದರ್ಶನ ಕಂಡಿತ್ತು.