ಮುಂಬೈ: ಖಾಸಗಿ ವಾಹಿನಿ ಖ್ಯಾತ ಕಾಮಿಡಿ ಶೋನಿಂದ ಹೊರ ಉಳಿದಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕಮ್ ಬ್ಯಾಕ್ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ನಿರೂಪಕ ಕಪಿಲ್ ಶರ್ಮಾ ಸುಳಿವು ನೀಡಿದ್ದಾರೆ.
ಸುನಿಲ್ ಗ್ರೋವರ್ ಶೋನಿಂದ ಹೊರ ನಡೆದ ಬಳಿಕ ಕಾಮಿಡಿ ಶೋನಿಂದ ಬಹುತೇಕ ಕಲಾವಿದರು ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡಿದ್ದರು. ಆದರೂ ಕಪಿಲ್ ಶರ್ಮಾ ತಮ್ಮ ಶೋ ನಡೆಸಿದ್ದರು. ನಾಲ್ಕೈದು ಸಂಚಿಕೆಗಳ ಬಳಿಕ ಕಲಾವಿದರ ಕೊರತೆಯಿಂದಾಗಿ ಶೋ ನಿಂತಿತ್ತು. ಕಪಿಲ್ ಶರ್ಮಾ ಮದುವೆ ಬಳಿಕ ಹೊಸ ಕಲಾವಿದರೊಂದಿಗೆ ಮತ್ತೊಮ್ಮೆ ಕಾಮಿಡಿ ಶೋ ಆರಂಭಿಸಿದ್ದರು. ನವಜೋತ್ ಸಿಂಗ್ ಸಿಧು ಸಹ ಕಾರ್ಯಕ್ರಮದ ಮುಖ್ಯ ಭಾಗವಾಗಿದ್ದರು. ಪುಲ್ವಾಮಾ ದಾಳಿ ಬಳಿಕ ನವಜೋತ್ ಸಿಂಗ್ ಸಿಧು ಹೇಳಿಕೆಗೆ ದೇಶದೆಲ್ಲಡೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದಿಂದ ಸಿಧು ಅವರನ್ನು ಕೈ ಬಿಡಲಾಗಿತ್ತು.
ನವಜೋತ್ ಸಿಂಗ್ ಸಿಧು ಕಾರ್ಯಕ್ರಮದಿಂದ ಹೊರ ಬಂದ ಬಳಿಕ ಶೋ ಟಿಆರ್ ಪಿ ಕಳೆದುಕೊಳ್ಳುತ್ತಿದೆ ಎನ್ನಲಾಗುತ್ತಿದೆ. ಟಾಪ್ 5ರಲ್ಲಿ ಸ್ಥಾನ ಪಡೆಯುತ್ತಿದ್ದ ಕಪಿಲ್ ಶೋ ಕೆಲ ವಾರ ಟಿಆರ್ಪಿ ಕಳೆದುಕೊಂಡಿದೆ. ಸಿಧು ಬದಲಾಗಿ ಅರ್ಚನಾ ಪೂರ್ಣ ಸಿಂಗ್ ಕಾರ್ಯಕ್ರಮದಲ್ಲಿದ್ದಾರೆ. ಸಿಧು ರೀ ಎಂಟ್ರಿ ಬಗ್ಗೆ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಕಪಿಲ್ ಶರ್ಮಾ ತಿಳಿಸಿದ್ದಾರೆ.
ನವಜೋತ್ ಸಿಂಗ್ ಸಿಧು ಸದ್ಯ ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಚುನಾವಣೆ ಮುಗಿಯವರೆಗೂ ಕಾರ್ಯಕ್ರಮಕ್ಕೆ ಬರುವ ಬಗ್ಗೆ ಮಾತನಾಡಿಲ್ಲ. ಚುನಾವಣೆಯ ಬಳಿಕ ನವಜೋತ್ ಸಿಂಗ್ ಸಿಧು ಕಾರ್ಯಕ್ರಮಕ್ಕೆ ಬರ ಮಾಡಿಕೊಳ್ಳುವ ಕುರಿತು ಚಿಂತನೆ ನಡೆಸಲಾಗುವುದು ಎಂದು ಕಪಿಲ್ ಶರ್ಮಾ ಹೇಳಿದ್ದಾರೆ.