ಫೆ.24ರಿಂದ ಕಲಬುರಗಿಯಲ್ಲಿ ರಾಷ್ಟ್ರಮಟ್ಟದ ಬೃಹತ್ ನಮ್ಮ ʻಸರಸ್ ಮೇಳ-2025ʼ

Public TV
4 Min Read
Namma Saras Mela 2

– 20 ರಾಜ್ಯಗಳ ಮಹಿಳಾ ಸ್ವ-ಸಹಾಯ ಗುಂಪುಗಳು ಭಾಗಿ

ಕಲಬುರಗಿ: ನಗರದ ಶ್ರೀ ಶರಣಬಸವೇಶ್ವರ ದೇವಸ್ಥಾನ ಜಾತ್ರೆ ಮೈದಾನದಲ್ಲಿ ಇದೇ ಫೆಬ್ರವರಿ 24 ರಿಂದ ಮಾರ್ಚ್ 5ರ ವರೆಗೆ 10 ದಿನಗಳ ಕಾಲ ರಾಷ್ಟ್ರಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಮಹಿಳಾ ಸ್ವ-ಸಹಾಯ ಗುಂಪುಗಳು women Self help group) ತಯಾರಿಸಿದ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಈ ಹಿನ್ನೆಲೆ ಮೇಳ ಯಶಸ್ಸಿಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಡಿ.ಸಿ ಬಿ.ಫೌಜಿಯಾ ತರನ್ನುಮ್ ಸೂಚನೆ ನೀಡಿದರು.

ಈ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಇದನ್ನೂ ಓದಿ: Champions Trophy 2025 | ಇಂದು ಭಾರತ-ಬಾಂಗ್ಲಾ ಮುಖಾಮುಖಿ – ಹಿಟ್‌ಮ್ಯಾನ್‌ ಪಡೆಗೆ ಗೆಲುವಿನ ತವಕ

Kalaburagi 5

ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ ಸಹಯೋಗದೊಂದಿಗೆ ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಆಯೋಜಿಸಿರುವ ʻಸರಸ್ ಮೇಳʼವನ್ನು (Namma Saras Mela) ಫೆ.24 ರಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ-ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ ಆರ್. ಪಾಟೀಲ್ ಅವರು ಉದ್ಘಾಟಿಸಲಿದ್ದು, ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಸಹ ಆಗಮಿಸಲಿದ್ದಾರೆ ಎಂದರು.

Namma Saras Mela

10 ದಿನಗಳ ಕಾಲ ಮೇಳ ನಡೆಯುವುದರಿಂದ ಒಟ್ಟಾರೆ ದೇಶದ ವಿವಿಧ ರಾಜ್ಯಗಳ ಸುಮಾರು 2,000ಕ್ಕೂ ಹೆಚ್ಚು ಸ್ವ-ಸಹಾಯ ಗುಂಪುಗಳ ಮಹಿಳೆಯರು, ಯುವ ಜನತೆ ಆಗಮಿಸಲಿದ್ದಾರೆ. ಮೇಳದಿಂದ ಸಹಜವಾಗಿಯೇ ಜಾತ್ರೆ ಮೈದಾನ ಪ್ರದೇಶದ ಸುತ್ತ ಜನಸಂದಣಿ ಹೆಚ್ಚಾಗುವುದರಿಂದ ಮೇಳಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸ್ವಚ್ಚತೆ, ಕುಡಿಯುವ ನೀರಿನ ವ್ಯವಸ್ಥೆ, ಪೊಲೀಸ್ ಬಂದೋ ಬಸ್ತ್, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಸುಗಮ‌ ಸಂಚಾರಕ್ಕೆ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇನ್ನು ಮುಂಜಾಗ್ರತಾ ಕ್ರಮವಾಗಿ ಜಾತ್ರೆ ಮೈದಾನದಲ್ಲಿ ವೈದ್ಯಕೀಯ ತಂಡ ಮತ್ತು ಅಗ್ನಿಶಾಮಕ ವಾಹನ ವ್ಯವಸ್ಥೆಯನ್ನು ನಿಯೋಜಿಸಬೇಕು ಎಂದ ಜಿಲ್ಲಾಧಿಕಾರಿಗಳು, ಮೇಳ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಿದ್ದು, ಆಯಾ ಸಮಿತಿಗಳಿಗೆ ನೀಡಲಾದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದರು. ಇದನ್ನೂ ಓದಿ: ಮುಖ್ಯ ಶಿಕ್ಷಕರಿಗೆ ಬಿಸಿ ಮುಟ್ಟಿಸಿದ ಇಲಾಖೆ – ಬೇಕಾಬಿಟ್ಟಿ ಸಭೆ, ಸಮಾರಂಭಗಳಿಗೆ ಹೋಗುವುದಕ್ಕೆ ಬ್ರೇಕ್‌

Namma Saras Mela 3

ರಾಜ್ಯದ 60 ಮಳಿಗೆಗಳು ಸ್ಥಾಪನೆ:
ಜಿಲ್ಲಾ ಪಂಚಾಯತ್ ಸಿಇಓ ಭಂವರ್ ಸಿಮಗ್ ಮೀನಾ ಮಾತನಾಡಿ, ಈ ಮೇಳದಲ್ಲಿ 10 ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳು ತಯಾರಿಸಿದ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10.30 ರಿಂದ ರಾತ್ರಿ 9.30ರ ವರೆಗೆ ಮೇಳ ನಡೆಯಲಿದ್ದು, ಕಲಬುರಗಿ ಸೇರಿ ರಾಜ್ಯದ 60 ಮಳಿಗೆಗಳು, ಒಟ್ಟಾರೆಯಾಗಿ 20 ರಾಜ್ಯಗಳ 250 ಮಳಿಗೆಗಳು ಇರಲಿವೆ ಎಂದು ವಿವರಿಸಿದರು.

ಇನ್ನೂ 20 ಲೈವ್ ಫುಡ್ ಕೋರ್ಟ್ ನಲ್ಲಿ ರಾಜ್ಯದ 10 ಮಳಿಗೆಗಳು ಹಾಗೂ ಬೇರೆ ರಾಜ್ಯಗಳ 10 ಲೈವ್ ಫುಡ್ ಸ್ಟಾಲ್‌ಗಳಿರಲಿವೆ. ʻಅಕ್ಕ ಕೆಫೆʼ ಶೀರ್ಷಿಕೆ ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಲೈವ್ ಫುಡ್ ಕೋರ್ಟ್ ನಲ್ಲಿ ರುಚಿ – ಶುಚಿ ಆಹಾರ ಪದಾರ್ಥಗಳು ಕೈಗೆಟುಕುವ ಬೆಲೆಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಪ್ರಮುಖವಾಗಿ ದಾವಣಗೆರೆ ಬೆಣ್ಣೆ ದೊಸೆ, ಮೈಸೂರು ಮಸಾಲ ದೊಸೆ, ಗಿರಮಿಟ್, ಬಜ್ಜಿ ಸೇರಿದಂತೆ ವಿವಿಧ ವೈವಿಧ್ಯಮಯ ಖಾದ್ಯಗಳು ದೊರೆಯಲಿವೆ. ಸ್ಥಳದಲ್ಲೇ ವಿವಿಧ ತಿಂಡಿ ಹಾಗೂ ಭಕ್ಷ್ಯಗಳನ್ನು ತಯಾರಿಸಿ ಕೊಡಲಾಗುತ್ತದೆ ಎಂದರು.

ಮನ ತಣಿಸಲಿದೆ ಸಾಂಸ್ಕೃತಿಕ ಸಂಜೆ
ನಮ್ಮ ʻಸರಸ್ ಮೇಳʼದಲ್ಲಿ 10 ದಿನಗಳ ಕಾಲ ಪ್ರತಿ ದಿನ ಸಂಜೆ 6:30 ರಿಂದ 9:39 ಗಂಟೆ ವರೆಗೆ ರಾಜ್ಯದ ಖ್ಯಾತ ಸಂಗೀತಗಾರರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸ್ಥಳೀಯ ಕಲಾವಿದರಿಂದ ವಿವಿಧ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ವಸ್ತು ಪ್ರದರ್ಶನಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ತಣಿಸಲಿವೆ ಎಂದು ಭಂವರ್ ಸಿಂಗ್ ಕಾರ್ಯಕ್ರಮಗಳ ರೂಪುರೇಷೆ ವಿವರಿಸಿದರು. ಇದನ್ನೂ ಓದಿ: ಬೆಳ್ಳಂಬೆಳಿಗ್ಗೆ ಮೈಕ್ರೋ ಫೈನಾನ್ಸ್, ಅಕ್ರಮ ಬಡ್ಡಿ ದಂಧೆಕೋರರ ಮನೆಗಳ ಮೇಲೆ ಪೊಲೀಸರ ದಾಳಿ

ಸರಸ್ ಮೇಳದಲ್ಲಿ ವೈವಿಧ್ಯಮಯ ಉತ್ಪನ್ನಗಳು
ಕರ್ನಾಟಕದ ಇಳಕಲ್ ಸೀರೆ, ಕಸೂತಿ ವಸ್ತುಗಳು, ಚನ್ನಪಟ್ಟಣ ಗೊಂಬೆ, ಬೀದರ ಜಿಲ್ಲೆಯ ಬಿದರಿ ಅಲಂಕಾರಿಕ ಉತ್ಪನ್ನಗಳು, ಕೊಪ್ಪಳ ಜಿಲ್ಲೆಯ ಕಿನ್ನಾಳ ಮಕ್ಕಳ ಆಟದ ಗೊಂಬೆಗಳು, ಉತ್ತರ ಭಾರತದಿಂದ ಜಮ್ಮು ಮತ್ತು ಕಾಶ್ಮೀರದ ಕಸೂತಿ ಉಡುಪುಗಳು, ಪಂಜಾಬ್ ಬಳೆಗಳು, ಸಿಕ್ಕಿಂ ಮತ್ತು ಬಿಹಾರದ ಕೈಮಗ್ಗ, ದಕ್ಷಿಣ ಭಾರತದ ತಮಿಳುನಾಡಿನ ಕೃತಕ ಆಭರಣಗಳು, ಕೇರಳದ ಮಣಿಗಳು, ಆಂಧ್ರ ಪ್ರದೇಶದ ಆಟಿಕೆಗಳು ಸೇರಿದಂತೆ ಮುಂತಾದ ವಿವಿಧ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಪ್ರಮುಖ ಆಕರ್ಷಣೆಯಾಗಿರಲಿದೆ.

ಸಾಮರ್ಥ್ಯಾಭಿವೃದ್ಧಿ ತರಬೇತಿ ಕಾರ್ಯಾಗಾರ:
ನಮ್ಮ ಸರಸ್ ಮೇಳದ ಮುಖ್ಯ ವೇದಿಕೆಯ ಪ್ರಾಂಗಣದದಲ್ಲಿ ಪ್ರತಿದಿನ ವಿವಿಧ ತರಬೇತಿ ಕಾರ್ಯಾಗಾರಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಮಹಿಳೆಯರ ಉತ್ಪನ್ನಗಳಿಗೆ ಪ್ಯಾಕಿಂಗ್ ಹಾಗೂ ಬ್ರ್ಯಾಂಡಿಂಗ್, ಮಾರುಕಟ್ಟೆ ಕೌಶಲ್ಯ, ಉತ್ಪನ್ನಗಳ ಮೌಲ್ಯವರ್ಧನೆ, ಸರ್ಕಾರದ ವಿವಿಧ ಇಲಾಖೆಯಿಂದ ಸಿಗುವ ಸೌಲಭ್ಯಗಳು, ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಸಾಮಾಜಿಕ ವಿಮಾ ಭದ್ರತಾ ಸೌಲಭ್ಯ ಸೇರಿದಂತೆ ಅವರ ಉದ್ಯಮವನ್ನು ಮೇಲ್ದರ್ಜೆಗೆ ಏರಿಸಲು ಬ್ಯಾಂಕ್ ಲಿಂಕೇಜ್ ಸೇವೆಗಳ ಕುರಿತು ಉಪನ್ಯಾಸ ಹಾಗೂ ತರಬೇತಿ ಕಾರ್ಯಾಗಾರ ಆಯೋಜಿಸಲಾಗುತ್ತಿದೆ. ಇದನ್ನೂ ಓದಿ: ರಾಜಧಾನಿಯಲ್ಲಿ ಮಿತಿಮೀರಿದ ಪುಂಡರ ಹಾವಳಿ – ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ ವ್ಹೀಲಿಂಗ್

Share This Article