ಮಡಿಕೇರಿ: ವಾಟ್ಸಾಪ್ ಸ್ಟೇಟಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಿಂದೂ ಸಂಘಟನೆಗಳ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದ ಆರೋಪಿ ವಿರುದ್ಧ ಕುಶಾಲನಗರದ ಹಿಂದೂ ಪರ ಸಂಘಟನೆಗಳ ಪ್ರಮುಖರು ಪೊಲೀಸರಿಗೆ ದೂರು ನೀಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಮಾದಾಪಟ್ಟಣ ಬಳಿ ಜ್ಯೂಸ್ ಸೆಂಟರ್ ನಡೆಸುತ್ತಿರುವ ಹ್ಯಾರಿಸ್ ವಿರುದ್ಧ ದೂರು ದಾಖಲಾಗಿದೆ. ಹ್ಯಾರಿಸ್ ತನ್ನ ವಾಟ್ಸಾಪ್ ಸ್ಟೇಟಸ್ನಲ್ಲಿ ಪ್ರಧಾನಿ ಮೋದಿ, ಆರ್ಎಸ್ಎಸ್ ಕಾರ್ಯಕರ್ತರ ತರಬೇತಿ ಚಿತ್ರಗಳ ಅಡಿಯಲ್ಲಿ ಅವಹೇಳನಕಾರಿ ಚಿತ್ರಸುದ್ದಿ ಅಳವಡಿಸಿದ್ದನು. ಇದನ್ನು ಗಮನಿಸಿದ ಸ್ಥಳೀಯ ಮಾದಾಪಟ್ಟಣದ ಹಿಂದೂಪರ ಸಂಘಟನೆಗಳ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿ ಹ್ಯಾರಿಸ್ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಪ್ರಕರಣವನ್ನು ಭಜರಂಗದಳ, ಹಿಂದೂ ಜಾಗರಣಾ ವೇದಿಕೆ, ದುರ್ಗಾವಾಹಿನಿ, ನಗರ ಬಿಜೆಪಿ ಘಟಕ, ಯುವಮೋರ್ಚಾ ಪ್ರಮುಖರು ಖಂಡಿಸಿದ್ದಾರೆ. ಅಲ್ಲದೆ ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಅವರಿಗೆ ದೂರು ನೀಡಿದ್ದಾರೆ.
ಪಪಂ ಸದಸ್ಯ ಅಮೃತ್ರಾಜ್, ಜಿಪಂ ಸದಸ್ಯ ಮಂಜುಳಾ, ಹಿಂದೂಪರ ಸಂಘಟನೆಯ ವಿನೀತ್, ವಿವಿಧ ಸಂಘಟನೆಗಳ ಪ್ರಮುಖರಾದ ಅನೀಶ್, ಕೆ.ಜಿ ಮನು, ಕೃಷ್ಣಪ್ಪ ಸೇರಿದಂತೆ ದೂರು ನೀಡಿದ್ದಾರೆ. ದೂರು ನೀಡಿದ ಹಿನ್ನೆಲೆಯಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಂಡಿದ್ದಾರೆ.