ಕಾರವಾರ: ನರೇಂದ್ರ ಮೋದಿಯವರು ಮತ್ತೊಮ್ಮೆ ಭಾರತದ ಪ್ರಧಾನ ಮಂತ್ರಿಗಳಾಗಲಿ, ಅನಂತಕುಮಾರ ಹೆಗಡೆಯವರ ದಿಗ್ವಿಜಯ ಯಾತ್ರೆ ಮುಂದುವರೆಯಲಿ, ಜೊತೆಗೆ ರಾಜ್ಯದಲ್ಲಿ ಸ್ಥಿರ ಬಿಜೆಪಿ ಸರ್ಕಾರಕ್ಕಾಗಿ ಶಿರಸಿಯ ರಾಘವೇಂದ್ರ ಮಠದಲ್ಲಿ ಅಭಯಂಕರ ದಿಗ್ವಿಜಯ ಹೋಮ ನಡೆಸಲಾಯಿತು.
ಇದೇ ವೇಳೆ ಯಜ್ಞದ ಪೂರ್ಣಾಹುತಿ ನಡೆಸಿಕೊಟ್ಟ ಅನಂತ್ ಕುಮಾರ್ ಹೆಗಡೆಯವರು ಮಾತನಾಡಿ, ಸುಮ್ಮನೆ ಇಲಿಯಂತಿರುವ ರಾಹುಲ್ ಗಾಂಧಿಯನ್ನು ಹುಲಿಯನ್ನಾಗಿ ಮಾಡಲು ಹೋಗಬೇಡಿ. ಇವತ್ತು ಇಡೀ ದೇಶದ ಜನ ಮೋದಿಯನ್ನು ಒಪ್ಪಿದ್ದಾರೆ ಸ್ಪಷ್ಟ ಬಹುಮತದೊಂದಿಗೆ ಕೇಂದ್ರದಲ್ಲಿ ಎನ್ಡಿಎ ಅಧಿಕಾರಕ್ಕೆ ಬರುತ್ತದೆ. ಎಲ್ಲಾ ಮಾಧ್ಯಮಗಳು ಕೂಡಾ ಇದನ್ನೇ ಹೇಳುತ್ತಿವೆ. ಇದೇ ರೀತಿ ಸತ್ಯಕ್ಕೆ ಹತ್ತಿರವಾದ ವರದಿ ಮಾಡಿದ್ದಲ್ಲಿ ಮಾಧ್ಯಮಗಳ ಗೌರವ ಉಳಿಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಜೊತೆಗೆ ಒಂದು ಬಾರಿ ನಡೆದಿರುವ ಮತದಾನವನ್ನು ಇನ್ನೊಮ್ಮೆ ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕೇಳಿದಾಗ, ಸುಪ್ರೀಂಕೋರ್ಟ್ ಈ ರೀತಿ ತೀರ್ಪು ನೀಡಿರುವ ತುಂಬಾ ಒಳ್ಳೆಯ ವಿಚಾರ. ಮತ್ತೊಮ್ಮೆ ಪರಿಶೀಲಿಸಿ ಫಲಿತಾಂಶ ಘೋಷಣೆ ಮಾಡೋದು ಸ್ವಾಗತಾರ್ಹ. ಸುಪ್ರೀಂಕೋರ್ಟ್ ಈ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಿದ್ದೇವೆ ಎಂದು ಹೇಳಿದರು.
ಶಿರಸಿ ನಗರ ಬಿಜೆಪಿ ಯುವಮೋರ್ಚಾ ಮತ್ತು ರಾಘವೇಂದ್ರ ಸರ್ಕಲ್ ಗೆಳೆಯರ ಬಳಗದಿಂದ ಏರ್ಪಡಿಸಲಾಗಿದ್ದ ಅಭಯಂಕರ ದಿಗ್ವಿಜಯ ಹೋಮದಲ್ಲಿ ಭಾರತೀಯ ಜನತಾ ಪಕ್ಷದ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರು ಆಗಮಿಸಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಸಸಮಂತ್ರಿ ಆಗಲೆಂದು ಪ್ರಾರ್ಥಿಸಿದರು.