– ಜಂಗಲ್ ರಾಜ್ಯದವ್ರು ಮಹಾಕುಂಭ ಮೇಳ ಟೀಕಿಸ್ತಾರೆ
ಪಾಟ್ನಾ: ಬಿಹಾರದ (Bihar) ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ (Lalu Prasad Yadav) ವಿರುದ್ಧ ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. ಪ್ರಾಣಿಗಳಿಗೆ ಮೀಸಲಾದ ಮೇವು ತಿಂದವರು ರೈತರ ಕಲ್ಯಾಣದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಬಿಹಾರದ ಭಾಗಲ್ಪುರದಲ್ಲಿ ನಡೆದ ರ್ಯಾಲಿಯಲ್ಲಿ ಅವರು ಮಾತನಾಡಿದರು. ಈ ವೇಳೆ, ಮಹಾಕುಂಭ ಮೇಳ ಕುರಿತು ಬಿಜೆಪಿ ವಿರುದ್ಧ ಆರ್ಜೆಡಿ ನಾಯಕರ ಟೀಕೆಗಳನ್ನು ಉಲ್ಲೇಖಿಸಿ, ಜಂಗಲ್ ರಾಜ್ಯದವ್ರು ನಮ್ಮ ಪರಂಪರೆ ಮತ್ತು ನಂಬಿಕೆಯನ್ನು ದ್ವೇಷಿಸುತ್ತಾರೆ. ಯುರೋಪಿನ ಇಡೀ ಜನಸಂಖ್ಯೆಗಿಂತ ಹೆಚ್ಚಿನ ಜನರು ಈ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇಂತಹ ಪವಿತ್ರ ಆಚರಣೆಯನ್ನು ಟೀಕಿಸುತ್ತಿದ್ದಾರೆ. ರಾಮ ಮಂದಿರವನ್ನು ವಿರೋಧಿಸುವವರು ಮಹಾ ಕುಂಭದ ಬಗ್ಗೆ ಅಪಪ್ರಚಾರ ಮಾಡಲು ಪ್ರತಿಯೊಂದು ಅವಕಾಶವನ್ನೂ ಬಳಸಿಕೊಳ್ಳುತ್ತಿದ್ದಾರೆ. ಈ ರೀತಿ ಕೆಟ್ಟದಾಗಿ ಮಾತನಾಡುವವರನ್ನು ಬಿಹಾರದ ಜನರು ಎಂದಿಗೂ ಕ್ಷಮಿಸುವುದಿಲ್ಲ ಎಂದು ನನಗೆ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಮತ್ತು ಬಿಹಾರದಲ್ಲಿ ಎನ್ಡಿಎ ಸರ್ಕಾರ ಯಾವಾಗಲೂ ರೈತರ ಕಲ್ಯಾಣಕ್ಕೆ ಆದ್ಯತೆ ನೀಡುತ್ತದೆ. ಈ ಸರ್ಕಾರ ಅಧಿಕಾರದಲ್ಲಿಲ್ಲದಿದ್ದರೆ, ದೇಶಾದ್ಯಂತ ನನ್ನ ರೈತ ಸಹೋದರ ಸಹೋದರಿಯರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಪ್ರಯೋಜನಗಳನ್ನು ಪಡೆಯುತ್ತಿರಲಿಲ್ಲ. ಸರ್ಕಾರದ ಪ್ರಯತ್ನಗಳಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಭಾರತದ ಕೃಷಿ ರಫ್ತು ಗಮನಾರ್ಹವಾಗಿ ಹೆಚ್ಚಾಗಿದೆ ಎಂದಿದ್ದಾರೆ.
ನಮ್ಮ ಸರ್ಕಾರದ ಅವಧಿಯಲ್ಲಿ ಹಲವಾರು ಕೃಷಿ ಉತ್ಪನ್ನಗಳನ್ನು ಮೊದಲ ಬಾರಿಗೆ ರಫ್ತು ಮಾಡಲಾಗಿದೆ. ಈಗ, ಬಿಹಾರದ ಮಖಾನಾ (ಫಾಕ್ಸ್ನಟ್) ಆ ಅವಕಾಶ ಸಿಕ್ಕಿದೆ. ಇದು ಜಾಗತಿಕ ಮಾರುಕಟ್ಟೆಗಳನ್ನು ತಲುಪಬೇಕಾದ ಸೂಪರ್ಫುಡ್ ಆಗಿದೆ. ಈ ವರ್ಷದ ಬಜೆಟ್ನಲ್ಲಿ, ಸರ್ಕಾರವು ಮಖಾನಾ ಮಂಡಳಿಯನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಅದನ್ನು ಶೀಘ್ರದಲ್ಲೇ ಜಾರಿಗೆ ತರಲಾಗುವುದು ಎಂದಿದ್ದಾರೆ.