ತಿರುವನಂತಪುರಂ: 2 ದಿನಗಳ ಕೇರಳ (Kerala) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ತಿರುವನಂತಪುರಂ (Thiruvananthapuram) ಹಾಗೂ ಕಾಸರಗೋಡು (Kasargod) ನಡುವೆ ಸಂಚರಿಸುವ ರಾಜ್ಯದ ಮೊದಲ ವಂದೇ ಭಾರತ್ ರೈಲಿಗೆ (Vande Bharat Express Train) ಹಾಗೂ ದೇಶದ ಮೊದಲ ವಾಟರ್ ಮೆಟ್ರೋಗೆ (Water Metro) ಚಾಲನೆ ನೀಡಿದ್ದಾರೆ.
ಮಂಗಳವಾರ ಬೆಳಗ್ಗೆ 11:10ರ ವೇಳೆಗೆ ತಿರುವನಂತಪುರಂ ಸೆಂಟ್ರಲ್ ಸ್ಟೇಷನ್ನಿಂದ ವಂದೇ ಭಾರತ್ ರೈಲಿಗೆ ಮೋದಿ ಚಾಲನೆ ನೀಡಿದ್ದಾರೆ. ಬಳಿಕ ಕೊಚ್ಚಿಗೆ (Kochi) ತೆರಳಿ ದೇಶದ ಮೊದಲ ವಾಟರ್ ಮೆಟ್ರೋಗೆ ಮೋದಿ ಚಾಲನೆ ನೀಡಿದರು.
ಕೇರಳದ ಮೊದಲ ವಂದೇ ಭಾರತ್ ರೈಲು ರಾಜಧಾನಿ ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶ್ಯೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು, ಕಾಸರಗೋಡು ಹೀಗೆ ಒಟ್ಟು 11 ಜಿಲ್ಲೆಗಳಲ್ಲಿ ಸಂಚರಿಸಲಿದೆ ಎಂದು ಪ್ರಧಾನ ಮಂತ್ರಿಗಳ ಕಚೇರಿ (PMO) ತಿಳಿಸಿದೆ. ಇದನ್ನೂ ಓದಿ: ಭ್ರಷ್ಟಾಚಾರ, ಕುಟುಂಬ ರಾಜಕಾರಣದ ಕೂಗು – ಹಾಸನದಲ್ಲಿ ಯಾರಿಗೆ ಒಲಿಯಲಿದೆ ಜಯ?
ಕೊಚ್ಚಿಯಲ್ಲಿ ಪ್ರಾರಂಭವಾಗಿರುವ ನೀರಿನ ಮೆಟ್ರೋ ಯೋಜನೆ ಕೊಚ್ಚಿ ಮತ್ತು ಸುತ್ತಮುತ್ತಲಿನ ಊರಿನ ಜನರಿಗೆ ಸುರಕ್ಷಿತ ಹಾಗೂ ಕೈಗೆಟಕುವ ದರದಲ್ಲಿ ಪ್ರಯಾಣವನ್ನು ಒದಗಿಸಲಿದೆ. ಇದು ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ನೀರಿನ ಮೆಟ್ರೋ ಯೋಜನೆ ಮೊದಲ ಹಂತದಲ್ಲಿ 2 ಮಾರ್ಗಗಳಲ್ಲಿ 8 ವಿದ್ಯುತ್ ಹೈಬ್ರಿಡ್ ದೋಣಿಗಳೊಂದಿಗೆ ನೌಕಾಯಾನವನ್ನು ಪ್ರಾರಂಭಿಸುತ್ತದೆ. ಹೈಕೋರ್ಟ್ನಿಂದ ವೈಪಿನ್ವರೆಗಿನ ಏಕಮುಖ ಪ್ರಯಾಣಕ್ಕೆ 20 ರೂ. ಇದ್ದು, ವೈಟ್ಟಿಲದಿಂದ ಕಾಕ್ಕನಾಡು ಮಾರ್ಗಕ್ಕೆ 30 ರೂ. ನಿಗದಿಪಡಿಸಲಾಗಿದೆ.
ವಾಟರ್ ಮೆಟ್ರೋ ಯೋಜನೆಯ ಒಟ್ಟು ವೆಚ್ಚ 1,137 ಕೋಟಿ ರೂ.ಯದ್ದಾಗಿದೆ. ಕೊಚ್ಚಿಯ ಪೋರ್ಟ್ ಸಿಟಿಯ ಸುತ್ತಲಿನ 10 ದ್ವೀಪಗಳ ಸುತ್ತ ಈ ಮೆಟ್ರೋ ಸಂಚಾರ ಮಾಡಲಿದೆ. 38 ಟರ್ಮಿನಲ್ಗಳ ಮೂಲಕ ಪ್ರಯಾಣಿಕರಿಗೆ ಸೇವೆ ನೀಡಲಿದೆ. ಈ ವಾಟರ್ ಮೆಟ್ರೋ ಯೋಜನೆಯು 78 ಕಿ.ಮೀ. ವ್ಯಾಪಿಸಿದ್ದು ಇಲ್ಲಿನ ದ್ವೀಪಗಳಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲಿದೆ. ಈ ವಾಟರ್ ಮೆಟ್ರೋ ರಬ್ಬರ್ ಟೈರ್ಡ್ ಎಲೆಕ್ಟ್ರಿಕ್ ಬೋಗಿಗಳನ್ನು ಹೊಂದಿದ್ದು, ಇದನ್ನು ಮಹಾರಾಷ್ಟ್ರದ ನಾಸಿಕ್ನಲ್ಲಿ ತಯಾರು ಮಾಡಲಾಗಿದೆ. ಇದನ್ನೂ ಓದಿ: ಹಾಲಿ ಸಚಿವರ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ತ್ರಿಕೋನ ಪೈಪೋಟಿ