ಹಾಸನ: ಪ್ರಧಾನಿ ನರೇಂದ್ರ ಮೋದಿಯವರಿಗೆ ಜೆಡಿಎಸ್ ಬಗ್ಗೆ ಮಾತನಾಡಲು ಸಬ್ಜೆಕ್ಟ್ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಹೇಳಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಈ ವೇಳೆ ಮೋದಿ ಜೆಡಿಎಸ್ (JDS) ಬಗ್ಗೆ ಮಾತನಾಡದಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿ, ಯಾವುದೇ ರೀತಿಯಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಚರ್ಚೆ ಮಾಡಲಿಕ್ಕೆ ಅವರತ್ರ ಸರಕು ಇಲ್ಲದೆ ಇರುವುದರಿಂದ ಜೆಡಿಎಸ್ ಬಗ್ಗೆ ಮಾತನಾಡಲು ಆಗಲ್ಲ. ದೇವೇಗೌಡರು ಪ್ರಧಾನಮಂತ್ರಿ ಆದಾಗ, ನಾನು ಮುಖ್ಯಮಂತ್ರಿ ಆದಾಗ ಇರಬಹುದು ಯಾವುದೇ ರೀತಿಯ ಈಗಿನ ಸರ್ಕಾರಗಳ ನಡವಳಿಕೆ ಏನಿದೆ. ಆ ರೀತಿ ಯಾವುದೇ ಭ್ರಷ್ಟಾಚಾರಕ್ಕೆ, ಕಾನೂನುಬಾಹಿರ ಚಟುವಟಿಕೆಗೆ ನಾವು ಪ್ರೋತ್ಸಾಹ ಕೊಡದೆ ಇರುವುದರಿಂದ ನಮ್ಮ ಪಕ್ಷದ ಬಗ್ಗೆ ಚರ್ಚೆ ಮಾಡಲು ಎರಡು ರಾಷ್ಟ್ರೀಯ ಪಕ್ಷಗಳಿಗೆ ಸರಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದ ಬಗ್ಗೆ ಏನು ಮಾತಾಡ್ತಾರೆ, ಮಾತನಾಡಲು ಸಬ್ಜೆಕ್ಟ್ ಏನಿದೆ..?. ನಾನು ಎರಡನೇ ಬಾರಿ ಮುಖ್ಯಮಂತ್ರಿ ಆದಾಗ ಮಂಡ್ಯಗೆ ಹಲವಾರು ಯೋಜನೆ ಕೊಟ್ಟೆ. ಇದೇ ಬಿಜೆಪಿ ನಾಯಕರು ಮಂಡ್ಯ ಬಜೆಟ್ ಅಂತ ಹೇಳಿ ವಿಧಾನಸಭೆ ಕಲಾಪದಲ್ಲಿ ಹಾಸ್ಯ ಮಾಡಿದ್ರು. ಕೊಟ್ಟಂತಹ ಹಣವನ್ನು ಬೇರೆ ಕಡೆ ಡೈವರ್ಟ್ ಮಾಡಿದ್ರು ಆ ಸತ್ಯ ಹೇಳಕೆ ಆಗುತ್ತಾ..?. ಆ ಸತ್ಯ ಹೇಳಲು ಸಾಧ್ಯವಿಲ್ಲ, ಆದ್ದರಿಂದ ಜೆಡಿಎಸ್ ಮಾತನಾಡಲು ಸರಕಿಲ್ಲ ಎಂದರು. ಇದನ್ನೂ ಓದಿ: ಸರಳತೆ ಮೆರೆದ ಪ್ರಧಾನಿ ಮೋದಿ- VHP ಮುಖಂಡರ ಕಾಲಿಗೆ ನಮಸ್ಕರಿಸಿದ ನಮೋ
ನಾನು ಕೆಲವು ಮಾಧ್ಯಮಗಳಲ್ಲಿ ಕೆಲವು ಅಂಶ ಗಮನಿಸಿದ್ದೇನೆ. ನರೇಂದ್ರ ಮೋದಿ (Narendra Modi) ಯವರು ಮಂಡ್ಯಗೆ ಬಂದ ತಕ್ಷಣ ದಳಪತಿಗಳಲ್ಲಿ ತಳಮಳ ಅಂತ. ನಮಗೆ ನರೇಂದ್ರ ಮೋದಿ ಬಂದಿದ್ದು ಗೊತ್ತಿಲ್ಲ, ಹೋಗಿದ್ದು ಗೊತ್ತಿಲ್ಲ. ಮೋದಿಯವರು ಇನ್ನೂ ಹತ್ತು ಸಲ ಬಂದ್ರು, ನಾಟ್ ಓನ್ಲಿ ಮಂಡ್ಯ, ಯಾವುದೇ ಭಾಗಕ್ಕೆ ಬಂದ್ರು ನಮಗೆ ಅದರ ಚಿಂತೆ ಇಲ್ಲ ಎಂದು ಹೇಳಿದರು.
ಮೋದಿಯವರು ತಾತ್ಕಾಲಿಕವಾಗಿ ಮಾತಿನಲ್ಲಿ ಖುಷಿ ಪಡಿಸಲಿಕ್ಕೆ ಬಂದು ಹೋದರೂ ಜನರು ಅವರ ಮಾತಿಗೆ ಈಗ ಮರುಳಾಗುವ ದಿನಗಳು ಉಳಿದಿಲ್ಲ. ಆದ್ದರಿಂದ ಯಾವುದೇ ತಳಮಳವೂ ಇಲ್ಲ, ಜನತಾದಳಕ್ಕೆ ಭೀತಿಯು ಇಲ್ಲ. ನಾವು ಇವತ್ತು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಹೋರಾಟ ಮಾಡುವ ನೈತಿಕ ಶಕ್ತಿಯನ್ನು ಉಳಿಸಿಕೊಂಡಿದ್ದೇವೆ, ಮುಂದುವರಿಯುತ್ತೆ ಎಂದು ತಿಳಿಸಿದರು.