– ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ರಾಜ್ಯ ರಿವರ್ಸ್ ಗೇರ್ನಲ್ಲಿ ಹೋಗುತ್ತೆ
ಶಿವಮೊಗ್ಗ: ನಿಮ್ಮ ಪ್ರೀತಿಗೆ ಕರ್ನಾಟಕದ ಅಭಿವೃದ್ಧಿ ಮಾಡಿ ಬಡ್ಡಿ ಸಮೇತ ತೀರಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದರು.
ಆಯನೂರಿನಲ್ಲಿ ನಡೆದ ಚುನಾವಣಾ (Election) ಪ್ರಚಾರದ ವೇಳೆ ಮಾತನಾಡಿದ ಅವರು, ಯಡಿಯೂರಪ್ಪ (BS Yediyurappa) ಅವರ ನೆಲದಿಂದ ರಾಜ್ಯದ ಜನರಿಗೆ ಅಸಲಿ ಗ್ಯಾರಂಟಿ ನೀಡುತ್ತೇನೆ. ರಾಜ್ಯದಲ್ಲಿ ಒಂದು ಬಲೂನ್ಗೆ ಹವಾ ತುಂಬಿದೆ. ಸುಳ್ಳು ಗಾಳಿ ತುಂಬಿ ಬಲೂನ್ ಹಾರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಯಾವುದೇ ಪ್ರಯೋಜನ ಆಗದು. ಮತದಾರರೇ ಆ ಬಲೂನ್ ನುಚ್ಚುನೂರು ಮಾಡಿದ್ದಾರೆ. ಹೆದರಿದ ಕಾಂಗ್ರೆಸ್ ಪ್ರಚಾರಕ್ಕೆ ಯಾರು ಯಾರನ್ನೋ ಕರೀತಿದ್ದಾರೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ರಾಜ್ಯ ರಿವರ್ಸ್ ಗೇರ್ನಲ್ಲಿ ಹೋಗುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಜನರು ಎಚ್ಚರಿಕೆಯಿಂದ ಇರಿ. ಬಂಡವಾಳಶಾಹಿಗಳನ್ನು ಹೊರದಬ್ಬಲು ಕಾಂಗ್ರೆಸ್ ಯೋಜಿಸಿದೆ. ಭ್ರಷ್ಟಾಚಾರ, ತುಷ್ಟೀಕರಣ ಹೊಂದಿದ ಸರ್ಕಾರದಿಂದ ಅಭಿವೃದ್ಧಿ ಸಾಧ್ಯವೇ? ಕಾಂಗ್ರೆಸ್ ಯುವ ಜನರ ಬಗ್ಗೆ ಯಾವತ್ತೂ ಯೋಚಿಸಿಲ್ಲ. ಆದರೆ ಬಿಜೆಪಿ ಮೇಡ್ ಇನ್ ಇಂಡಿಯಾ ಕಲ್ಪನೆಯನ್ನು ಹೊಂದಿದೆ. ನಿಮ್ಮ ಹಿರಿಯರು ಪಟ್ಟ ಸಂಕಟ ನಿಮಗೂ ಸಿಗಲು ನಾನು ಅವಕಾಶ ಕೊಡುವುದಿಲ್ಲ ಎಂದರು.
ಕಾಂಗ್ರೆಸ್ನ ಅಭಿವೃದ್ಧಿ ಕೇವಲ ಕಾಗದದಲ್ಲಿ ಮಾತ್ರವಾಗಿತ್ತು. ಕಾಂಗ್ರೆಸ್ ರಾಜ್ಯದಲ್ಲಿ 5 ವರ್ಷದಲ್ಲಿ 10 ಲಕ್ಷ ಉದ್ಯೋಗ ನೀಡುವ ಭರವಸೆ ನೀಡಿದೆ. ಅಂದರೆ ಪ್ರತಿ ವರ್ಷ 2 ಲಕ್ಷ ಉದ್ಯೋಗ ನೀಡುತ್ತದೆ. ಕಾಂಗ್ರೆಸ್ ಸುಳ್ಳು ಭರವಸೆ ಇಲ್ಲೇ ಗೊತ್ತಾಗುತ್ತದೆ ಎಂದು ಕಿಡಿಕಾರಿದ ಅವರು, ಬಿಜೆಪಿ ಮುದ್ರಾ ಯೋಜನೆಯಿಂದ ಯುವಕರಿಗೆ 20 ಲಕ್ಷ ಕೋಟಿ ರೂ. ನೆರವು ನೀಡಿದೆ. ಇದರ ಲಾಭ ಶಿವಮೊಗ್ಗದ ಸಾವಿರಾರು ಜನರಿಗೆ ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಮೂರೂವರೆ ವರ್ಷ ಅಧಿಕಾರ ಮಾಡಿದೆ. ಪ್ರತಿ ವರ್ಷ 13 ಲಕ್ಷಕ್ಕೂ ಹೆಚ್ಚು ಉದ್ಯೋಗ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ನಿರ್ಮಿಸಿಲ್ಲ. ಬಿಜೆಪಿ ಈ ಅನ್ಯಾಯ ಸರಿಪಡಿಸಿದೆ. ಹೀಗಾಗಿ ಹೆಣ್ಣುಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಹೋಗುತ್ತಿದ್ದಾರೆ. ಹೆಣ್ಣುಮಕ್ಕಳು ಈಗ ಎಲ್ಲ ಕ್ಷೇತ್ರದಲ್ಲೂ ಮುಂದುವರಿದಿದ್ದಾರೆ, ಸೇನೆಯಲ್ಲೂ ಸೇರಲು ಬಿಜೆಪಿ ಅವಕಾಶ ಮಾಡಿಕೊಟ್ಟಿದೆ. ಇದೇ ನಾರಿ ಶಕ್ತಿ 21ನೇ ಶತಮಾನದಲ್ಲಿ ಭಾರತವನ್ನು ಮುಂದಕ್ಕೆ ಕರೆದೊಯ್ಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಒಂದೇ ಮಂತ್ರ ಘೋಷಣೆ ಆಗುತ್ತಿದೆ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರವಾಗಿದೆ. ಈ ಭಾಗದಲ್ಲಿ ವೈವಿಧ್ಯಮಯ ಕೃಷಿ ನಡೆಯುತ್ತಿದೆ. ಕೃಷಿ ಹಬ್ ಆಗಿ ಪರಿವರ್ತನೆ ಆಗಿದೆ. ಕಡಿಮೆ ದರದ ಅಡಕೆ ಆಮದು ನಿರ್ಧಾರ ಕಾಂಗ್ರೆಸ್ ಮಾಡಿತ್ತು. ಅಡಕೆ ಬೆಳೆಗಾರರ ಸಮಸ್ಯೆ ಬಗೆಹರಿಸಲಿಲ್ಲ. ಆದರೆ ನಾನು ಗುಜರಾತ್ ಸಿಎಂ ಆಗಿದ್ದಾಗ ಅಡಕೆ ಸಮಸ್ಯೆ ನಿವಾರಣೆ ಮಾಡಿದ್ದೆ. ಅಂದು ಸಿಎಂ ಆಗಿದ್ದ ಯಡಿಯೂರಪ್ಪ ನನಗೆ ಮನವಿ ಮಾಡಿದ್ದರು. ನಮ್ಮ ಸರ್ಕಾರ ಕೃಷಿ ರಫ್ತಿಗೆ ಹೆಚ್ಚಿನ ಒತ್ತು ನೀಡಿದೆ. ಪರಿಣಾಮ ಜಗತ್ತಿನ ಟಾಪ್ 10 ಕೃಷಿ ರಫ್ತು ದೇಶದ ಪಟ್ಟಿಗೆ ಭಾರತ ಸೇರಿದೆ. ಕೊರೊನಾ ಕಾಲದಲ್ಲೂ ರಫ್ತು ಆಗಿತ್ತು ಎಂದು ನೆನಪಿಸಿಕೊಂಡರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಚನ್ನಬಸಪ್ಪ ಹುಲ್ಲತ್ತಿ ಮನೆ ಮೇಲೆ IT ರೇಡ್ – ಕೋಟಿ ಕೋಟಿ ಹಣ ಸೀಜ್
ಫಸಲ್ ವಿಮಾ ಯೋಜನೆಯಡಿ 1.30 ಲಕ್ಷ ಕೋಟಿ ರೂ ಅನುದಾನ ನೀಡಲಾಗಿದೆ. ರಾಜ್ಯದ ಜನರಿಗೂ 10 ಸಾವಿರ ಕೋಟಿ ಸಿಕ್ಕಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 18 ಸಾವಿರ ಕೋಟಿ ಹಣ ನೇರವಾಗಿ ರೈತರಿಗೆ ತಲುಪಿದೆ ಎಂದು ಹೇಳಿದರು. ಇದನ್ನೂ ಓದಿ: ಧಾರವಾಡದಲ್ಲಿ ಮೂರು ದಿನ ಮದ್ಯ ಮಾರಾಟ ನಿಷೇಧ