ಮಂಡ್ಯ: ಜೆಡಿಎಸ್ನ ಯಾವ ಶಾಸಕರು ಸಂಪರ್ಕದಲ್ಲಿ ಇದ್ದಾರೆ ಎಂಬುದನ್ನು ಹಳೇ ಮೈಸೂರು ಭಾಗದ ಬಿಜೆಪಿ ನಾಯಕ ನಾರಾಯಣಗೌಡ ಅವರೇ ಹೇಳಬೇಕು ಎಂದು ಮಾಜಿ ಸಚಿವ ಪುಟ್ಟರಾಜು ವ್ಯಂಗ್ಯವಾಡಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡಪುರ ತಾಲೂಕಿನ ಕೆರೆತಣ್ಣೂರಿನಲ್ಲಿ ಮಾತಾಡಿದ ಪುಟ್ಟರಾಜು, ಬಿಜೆಪಿ ಸಂಪರ್ಕದಲ್ಲಿ ಜೆಡಿಎಸ್ ಶಾಸಕರು ಇದ್ದಾರೆ ಎಂಬ ನಾರಾಯಣಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ನನ್ನ ಗಮನಕ್ಕೆ ಬಂದ ಹಾಗೆ ಜೆಡಿಎಸ್ನ ಯಾವ ಶಾಸಕರು ಕೂಡ ಬಿಜೆಪಿಯ ಸಂಪರ್ಕದಲ್ಲಿ ಇಲ್ಲ. ಎಲ್ಲರೂ ಜೆಡಿಎಸ್ನೊಂದಿಗೆ ಇದ್ದಾರೆ. ಅವರ ಸಂಪರ್ಕದಲ್ಲಿ ಯಾರು ಇದ್ದಾರೆ ಎಂದು ಹಳೆ ಮೈಸೂರು ಭಾಗದ ಬಿಜೆಪಿ ನಾಯಕ ನಾರಾಯಣಗೌಡ ತಿಳಿಸಬೇಕು ಎಂದು ಟಾಂಗ್ ನೀಡಿದರು.
ದೇವೇಗೌಡ ಅವರ ಕುಟುಂಬದ ವಿರುದ್ಧ ನಾರಾಯಣಗೌಡ ಅವರ ವಾಗ್ದಾಳಿಗೆ ಪ್ರತಿಕ್ರಿಯಿಸಿದ ಪುಟ್ಟರಾಜು, ದೇವೇಗೌಡರ ಕುಟುಂಬಕ್ಕೆ ಎಚ್ಚರಿಕೆ ಕೊಟ್ಟ ಬಹಳ ಜನ ಮಣ್ಣಾಗಿ ಹೋಗಿದ್ದಾರೆ. ನಾರಾಯಣಗೌಡರು ಆಕಾಶ ನೋಡಿಕೊಂಡು ಉಗಿದರೇ ಅವರ ಮುಖಕ್ಕೆ ಬೀಳುತ್ತದೆ. ಅವರು ಮಾತಾನಾಡುವುದು ಅವರಿಗೆ ತಿರುಗು ಬಾಣವಾಗಬಾರದು ಅದನ್ನು ಎಚ್ಚೆತ್ತುಕೊಂಡು ಮಾತಾನಾಡಬೇಕು ಎಂದು ಎಚ್ಚರಿಸಿದರು.
ನಾರಾಯಣಗೌಡ ಅವರು ಸಣ್ಣ ನೀರಾವರಿ ಖಾತೆಯನ್ನೆ ತೆಗೆದುಕೊಂಡು ಬರಲಿ ಸಂತೋಷ. ನಾನು ಅವರ ಕ್ಷೇತ್ರಕ್ಕೆ ಎಷ್ಟು ಅನುದಾನ ನೀಡಿದ್ದೇನೆ ಅಷ್ಟೇ ನನ್ನ ಕ್ಷೇತ್ರಕ್ಕೆ ನೀಡಲಿ. ನಾನು ಕೊಟ್ಟಿರೋದು ಅಂಕಿ ಅಂಶಗಳಲ್ಲಿ ಇದೆ. ನಾನು ನಾರಾಯಣಗೌಡ ಸಹಪಾಠಿನೇ ಅಲ್ಲ, ನಾನು ಯಾಕೆ ಜಿದ್ದು ಮಾಡಲಿ. ಗೆದ್ದಿದ್ದಾರೆ ಅಭಿವೃದ್ಧಿ ಮಾಡಲಿ ಸಾಕು ಎಂದು ಹೇಳಿದರು.