ಧಾರವಾಡ: ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರನ್ನು ಬಗ್ಗು ಬಡಿಯಬೇಕು ಎಂದು ಕರವೇ ಅಧ್ಯಕ್ಷ ಟಿಎ ನಾರಾಯಣಗೌಡ ಹೇಳಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಕಾರ್ಯಕರ್ತರು ರಾತ್ರೋರಾತ್ರಿ ಬೆಳಗಾವಿಗೆ ಬಂದಿದ್ದಾರೆ, ಇನ್ನು ಹಲವು ಕಾರ್ಯಕರ್ತರು ಬರುತ್ತಿದ್ದಾರೆ. ಮೊದಲು ಬೆಳಗಾವಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದ ಚನ್ನಮ್ಮ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಂತರ 12 ಗಂಟೆಗೆ ಸುವರ್ಣ ಸೌಧಕ್ಕೆ ಪಾದಯಾತ್ರೆ ಮೂಲಕ ಹೋಗುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: MES ಗಲಾಟೆ ಮಾಡಿದೆ ಅಂತ ನಾನು ಹೇಳಲ್ಲ: ಡಿ.ಕೆ ಶಿವಕುಮಾರ್
ಹಲವು ವರ್ಷಗಳಿಂದ ಎಂಇಎಸ್ ಪುಂಡಾಟಿಕೆ ನೋಡುತ್ತಾ ಬಂದಿದ್ದೇನೆ. ಅವರು ಈಗ ಕನ್ನಡದ ಬಾವುಟ ಸುಡುವುದು, ಸಂಗೋಳ್ಳಿ ರಾಯಣ್ಣನ ಮೂರ್ತಿ ಭಗ್ನ ಮಾಡುವುದು, ಕನ್ನಡಿಗರ ವಾಹನ ಸುಡುವ ಪುಂಡಾಟಿಕೆ ಮಾಡುತ್ತಲೇ ಬಂದಿದ್ದಾರೆ. ಒಂದು ಕಡೆ ಶಿವಸೇನೆ ಮತ್ತೊಂದು ಕಡೆ ಎಂಇಎಸ್ ಪುಂಡರಿದ್ದಾರೆ. ರಾಜ್ಯ ಸರ್ಕಾರಕ್ಕೆ ನಾವು ಎಂಇಎಸ್ ನಿಷೇಧ ಮಾಡಲು ಒತ್ತಾಯಿಸಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿ ಪ್ರಕರಣದಲ್ಲಿ MESನ ಪ್ರಮುಖರನ್ನು ಬಂಧಿಸಲಾಗಿದೆ: ಬೊಮ್ಮಾಯಿ
ನಮ್ಮ ಸರ್ಕಾರಗಳು ಎಂಇಎಸ್ ಒಲೈಸುತ್ತಲೇ ಬಂದಿದ್ದಾರೆ. ಇದರಿಂದ ಅವರು ಮಿತಿಮೀರಿ ಗುಂಡಾಗಿರಿ ದಾದಾಗಿರಿ ಮಾಡುತ್ತಿದ್ದಾರೆ. ಸಿಎಂಗೆ ಹಾಗೂ ಗೃಹ ಸಚಿವರಿಗೆ ಭೇಟಿ ಮಾಡಿ ಹೇಳಲು ಈಗ ಬಂದಿದ್ದೇವೆ. 1999 ರಿಂದ ಇದನ್ನು ಎದುರಿಸಿಕೊಂಡೇ ಬಂದಿದ್ದೇವೆ. ಬೆಳಗಾವಿಗೆ 7 ಜನ ಎಂಇಎಸ್ ಶಾಸಕರು ಆಯ್ಕೆ ಆಗುತ್ತಿದ್ದರು, ಪಾಲಿಕೆಯಲ್ಲಿ ಸದಸ್ಯರು ಇರುತ್ತಿದ್ದರು. ಈಗ ಅವರು ಯಾರೂ ಇಲ್ಲ, ನೆಲಕಚ್ಚಿದ್ದಾರೆ. ಅದನ್ನು ಸಹಿಸಿಕೊಳ್ಳಲು ಆಗದೇ ಅವರು ಗುಡಾಗಿರಿ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ MES ಪುಂಡರ ಅಟ್ಟಹಾಸ – ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ, ಬಸ್ ಮೇಲೆ ಕಲ್ಲು ತೂರಾಟ
ಇವರನ್ನು ಬೇರು ಸಮೇತ ಕಿತ್ತು ಹಾಕಬೇಕು. ನಮ್ಮ ಸರ್ಕಾರ ರಣ ಹೇಡಿ ಸರ್ಕಾರ ಆಗಬಾರದು. ನಮ್ಮ ಪೊಲೀಸ್ ವ್ಯವಸ್ಥೆ ರಣಹೇಡಿ ಅಲ್ಲ, ಇವರು ಪಾಕಿಸ್ತಾನದ ಭಯೋತ್ಪಾದಕರಂತೆ ಶಿವಸೇನೆ ಹಾಗೂ ಎಂಇಎಸ್ನವರು ಮಾಡುತ್ತಿದ್ದಾರೆ. ಅದಕ್ಕೆ ಇವರನ್ನು ಬಗ್ಗು ಬಡಿಯ ಬೇಕು. ಪೊಲೀಸರು ಏನಾದರೂ ಮಾಡಲಿ ನಾನು ಅಂಜಲ್ಲ, ಹಿಂದೆ ಸರಿಯಲ್ಲ, ಉದ್ದೇಶದಂತೆ ಬೆಳಗಾವಿಗೆ ಹೋಗಿ ಮುತ್ತಿಗೆ ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.