ಮೈಸೂರು: ನಂಜನಗೂಡಿನ ಜ್ಯುಬಿಲಿಯಂಟ್ ಕಂಪನಿಯ ಕ್ಯಾಂಟೀನ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಮಹಿಳೆಗೂ ಕೊರೊನಾ ಭೀತಿ ಎದುರಾಗಿದೆ.
ನಂಜನಗೂಡಿನ ನಿವಾಸಿ 40 ವರ್ಷದ ಮಹಿಳೆ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದರು. ವಿಷಯ ತಿಳಿದು ವೈದ್ಯರು ಅಂಬುಲೆನ್ಸ್ ಮೂಲಕವೇ ಮಹಿಳೆಯ ಮನೆಗೆ ತೆರಳಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಮಹಿಳೆಯನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಹಾಮಾರಿ ಕೊರೊನಾ ವೈರಸ್ ಅಟ್ಟಹಾಸ ಕರ್ನಾಟಕ ರಾಜ್ಯದಲ್ಲಿ ಮುಂದುವರಿದಿದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ನಡುವೆ ಮೈಸೂರಿನಲ್ಲಿ ಐವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಜಿಲ್ಲೆಯ ನಂಜನಗೂಡಿನ 3ನೇ ಸೋಂಕಿತನಿಂದ ಮತ್ತೆ ಐವರಿಗೆ ಕೊರೊನಾ ಹರಡಿದೆ. ಒಟ್ಟು ಮೈಸೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 8ಕ್ಕೆ ಏರಿದೆ. ಇದರಿಂದ ಸಾಂಸ್ಕøತಿಕ ನಗರಿ ಜನತೆ ಇನ್ನಷ್ಟು ಬೆಚ್ಚಿಬಿದ್ದಿದ್ದಾರೆ.
ಐವರು ಸೋಂಕಿತರು ನಂಜನಗೂಡು ಪಟ್ಟಣ, ಚಾಮುಂಡಿಪುರಂ, ರಾಮಸ್ವಾಮಿ ಲೇಔಟ್, ಗೋವಿಂದ ರಾಜ ಲೇಔಟ್ ಹಾಗೂ ಯರಗನಹಳ್ಳಿ ನಿವಾಸಿಗಳಾಗಿದ್ದಾರೆ. ಒಟ್ಟು ಐವರು ಜುಬಿಲಿಟ್ ಫ್ಯಾಕ್ಟರಿ ನೌಕರರಾಗಿದ್ದಾರೆ. 3ನೇ ಸೋಂಕಿತನ ಸಂಪರ್ಕದಲ್ಲಿದ್ದ 7 ಮಂದಿಯನ್ನ ಕ್ವಾರೆಂಟೈನ್ನಲ್ಲಿಡಲಾಗಿತ್ತು, ಇದರಲ್ಲಿ 5 ಸ್ಥಳೀಯ ನಿವಾಸಿಗಳಿಗೆ ಕೊರೊನಾ ಇರುವುದು ಧೃಢವಾಗಿದೆ. ಈ ಕುರಿತು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ನಿನ್ನೆ ಒಂದೇ ದಿನ 18 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.
ಐವರಿಗೆ ಕೊರೋನಾ ಪಾಸಿಟಿವ್ ಪತ್ತೆ ಹಿನ್ನೆಲೆ ನಂಜನಗೂಡು ಪಟ್ಟಣ ಬಂದ್ ಮಾಡಿ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ. ಮಧ್ಯರಾತ್ರಿಯಿಂದಲೇ ನಂಜನಗೂಡು ಪಟ್ಟಣಕ್ಕೆ ಯಾರೂ ಹೋಗುವಂತಿಲ್ಲ, ಬರುವಂತಿಲ್ಲ. ವಾಹನ ಸಂಚಾರ ಹಾಗೂ ಸಾರ್ವಜನಿಕರ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿದೆ. ಮುಂದಿನ ಆದೇಶದವರೆಗೂ ನಂಜನಗೂಡು ಪಟ್ಟಣ ಬಂದ್ ಆಗಲಿದೆ.