ಬೆಂಗಳೂರು: ಮೈಸೂರಿನ ಬಳಿಕ ಬೆಂಗಳೂರಿನಲ್ಲಿಯೂ ನಕಲಿ ತುಪ್ಪದ ಜಾಲ ಪತ್ತೆಯಾಗಿದೆ.
ಮೈಸೂರಿನಲ್ಲಿ ಉತ್ಪಾದಿಸಲ್ಪಟ್ಟ ನಕಲಿ ತುಪ್ಪ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಕೆಎಂಎಫ್ ಅಧಿಕಾರಿಗಳ ಪರಿಶೀಲನೆ ವೇಳೆ ನಕಲಿ ತುಪ್ಪದ ಜಾಲ ಬಯಲಾಗಿದೆ. ನಕಲಿ ತುಪ್ಪ ಪತ್ತೆಗಾಗಿ ಹಲವು ತಂಡಗಳನ್ನು ರಚನೆ ಮಾಡಿದ್ದ ಕೆಎಂಎಫ್ ಅಧಿಕಾರಿಗಳು ಬೆಂಗಳೂರಿನ ಹನುಮಂತನಗರ, ಜಯನಗರ, ರಾಜಾಜಿನಗರ ನೆಲಮಂಗಲ ಬಳಿಯ ಮಾಕಳಿ, ಹೊಸಕೋಟೆಯ ದೇವನಗೊಂದಿ ಹಾಗೂ ಇನ್ನಿತರ ಕಡೆಗಳಲ್ಲಿ ಸಗಟು ಮಾರಾಟದ ಅಂಗಡಿಗಳು ಮತ್ತು ಗೋದಾಮುಗಳಲ್ಲಿ ಪರಿಶೀಲನೆ ನಡೆಸಿದಾಗ ಸತ್ಯ ಬಹಿರಂಗಗೊಂಡಿದೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಶಾಸಕ ಎಂ.ಪಿ. ಕುಮಾಸ್ವಾಮಿಯಿಂದ ದರ್ಪ
ಪರಿಶೀಲನೆ ವೇಳೆ ನಂದಿನಿ ತುಪ್ಪದ 1,000 ಎಂಎಲ್ ಸ್ಯಾಚೆ ಹಾಗೂ 15 ಕೆಜಿ ತೂಕದ ಟಿನ್ಗಳು ಪತ್ತೆಯಾಗಿದ್ದು, 1,000 ಮಿಲಿ ಸ್ಯಾಚೆ ಮಾದರಿಯನ್ನ ಎಫ್ಎಸ್ಎಸ್ಎಐಗೆ ರವಾನಿಸಲಾಗುತ್ತಿತ್ತು. ಅದೇ ರೀತಿ ಮತ್ತೊಂದು ಮಾದರಿಯನ್ನ ಕೆಎಂಎಫ್ ಗುಣ ಭರವಸೆ ವಿಭಾಗದಲ್ಲಿ ಪರಿಶೀಲನೆ ನಡೆಸಿದಾಗ, ಈ ವೇಳೆ ನಕಲಿ ತುಪ್ಪ ಎಂಬುದು ಪತ್ತೆಯಾಗಿದ್ದು, ಬೆಂಗಳೂರಿನ ಶೃತಿ ಮಾರ್ಕೆಟಿಂಗ್ ಕಾರ್ಪೋರೇಷನ್ ಅವರು ನಕಲಿ ತುಪ್ಪ ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ.
ಇದೀಗ ಈ ಸಂಬಂಧ ಕೆಎಂಎಫ್ ಮಾರ್ಕೆಟಿಂಗ್ ವಿಭಾಗದ ಅಪರ ನಿರ್ದೇಶಕ ಬಿ. ಪಿ. ಸುರೇಶ್ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಶೃತಿ ಮಾರ್ಕೆಟಿಂಗ್ ಕಾರ್ಪೋರೇಷನ್ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್ನಲ್ಲಿ ವೈನ್ಸ್ಟೋರ್ – ಮಹಾರಾಷ್ಟ್ರ ಸರ್ಕಾರದಿಂದ ಅನುಮತಿ