ಮಂಗಳೂರು: ಜಿಲ್ಲೆಯ ಬಿಜೆಪಿ ಕಚೇರಿಯಲ್ಲಿ ರಾಜ್ಯ ಬಿಜೆಪಿ ಸಹಾಯವಾಣಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಅವರು ಇಂದು ಚಾಲನೆ ನೀಡಿದರು.
ಈ ಬಗ್ಗೆ ಮಾಧ್ಯಮ ಜೊತೆಗೆ ಮಾತನಾಡಿದ ಅವರು, ಮಾರ್ಚ್ 23ರಿಂದಲೇ ರಾಜ್ಯದ ಎಲ್ಲಾ ಜಿಲ್ಲೆ, ಮಂಡಲಗಳಲ್ಲಿ ಬಿಜೆಪಿ ವಾರ್ ರೂಂ ಆರಂಭವಾಗಿದೆ. ಬುಧವಾರದವರೆಗೆ 20,13,910 ಆಹಾರದ ಪೊಟ್ಟಣ, 1,96,150 ಮಾಸ್ಕ್ ಮತ್ತು 5,95,705 ರೇಷನ್ ಕಿಟ್ಗಳನ್ನು ರಾಜ್ಯಾದ್ಯಂತ ವಿತರಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದ್ದರು. ಇವತ್ತಿನಿಂದ ಬಿಜೆಪಿ ಕರ್ನಾಟಕ ಕೋವಿಡ್ ಹೆಲ್ಪ್ ಲೈನ್ ಆರಂಭವಾಗಲಿದ್ದು, 08068324040 ಈ ಸಂಖ್ಯೆ ಇಡೀ ಕರ್ನಾಟಕ ರಾಜ್ಯಕ್ಕೆ ಒಂದೇ ಆಗಲಿದೆ. 8722557733 ಈ ನಂಬರ್ ಮೂಲಕ ವಾಟ್ಸಾಪ್ ಸಂಪರ್ಕ ಮಾಡಿ ರಾಜ್ಯದ ಜನರು ಬಿಜೆಪಿಯನ್ನು ಸಂಪರ್ಕಿಸಿ ನೆರವು ಪಡೆಯಬಹುದು ಅಂತ ಹೇಳಿದರು.
ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಕರೆದುಹೋಗಲು ವ್ಯವಸ್ಥೆ, ಮೆಡಿಕಲ್-ಆಹಾರ ಸಾಮಾಗ್ರಿಗಳಿಗೆ ವ್ಯವಸ್ಥೆ, ತುರ್ತು ಪರಿಸ್ಥಿತಿ ಹೀಗೆ 12 ವಿಷಯಗಳಿಗೆ ಯಾವುದೇ ಕರೆಗಳು ಬಂದಲ್ಲಿ ಎಲ್ಲಿಂದ ಕರೆ ಬಂದಿದೆಯೋ ಅಲ್ಲಿನ ಮಂಡಲ, ವಿಭಾಗಗಳಿಗೆ ತಿಳಿಸಲಾಗುವುದು. ತಕ್ಷಣ ಅಲ್ಲಿನ ಕಾರ್ಯಕರ್ತರು ಕರೆ ಮಾಡಿದವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಿ ಕೊಡುತ್ತಾರೆ. ಅಲ್ಲದೆ ಆ ಬಗ್ಗೆ ಫೋಟೋ ತೆಗೆದು ಅಪ್ಡೇಟ್ ಮಾಡಲಾಗುತ್ತದೆ. ಇದರಿಂದ ಯಾವ ದೂರು ಪೂರೈಸಿದೆ ಎಂಬುದರ ಬಗ್ಗೆ ಮಾಹಿತಿ ಸುಲಭವಾಗಿ ಲಭ್ಯವಾಗಲಿದೆ. ಈ ಬಗ್ಗೆ ಪ್ರತಿ ದಿನ ರಾತ್ರಿ 9 ಗಂಟೆಗೆ ಸಭೆ ಕರೆಸಿ ಅಂದಿನ ದಿನ ಎಷ್ಟು ದೂರು ದಾಖಲಾಗಿವೆ, ಎಷ್ಟು ದೂರಿಗೆ ಪರಿಹಾರ ದೊರಕಿದೆ, ಎಷ್ಟು ದೂರುಗಳು ಬಾಕಿ ಉಳಿದಿವೆ ಎಂದು ಚರ್ಚೆ ನಡೆಸಲಾಗುವುದು ಎಂದು ನಳೀನ್ ಕುಮಾರ್ ತಿಳಿಸಿದರು.
ಲಾಕ್ಡೌನ್ನಿಂದ ಜನರು ಸಂಕಷ್ಟಕ್ಕೆ ಒಳಗಾಗಬಾರದೆಂದು ಅಲ್ಲಲ್ಲಿ ವಾರ್ ರೂಂಗಳನ್ನು ಈಗಾಗಲೇ ತೆರೆಯಲಾಗಿದೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಪ್ರತಿಯೊಬ್ಬ ಕಾರ್ಯಕರ್ತನೂ ಐದು ಜನ ಬಡ, ನಿರ್ಗತಿಕರಿಗೆ ಊಟವನ್ನು ಒದಗಿಸಬೇಕು. ಜೊತೆಗೆ ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ಆಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು.