ಬೆಂಗಳೂರು: ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಅರ್ಜಿ ವಿಚಾರಣೆ ನಡೆಸಿದ 63ನೇ ಸಿಸಿಎಚ್ ನ್ಯಾಯಾಲಯ ನಲಪಾಡ್ ಮತ್ತು ತಂಡದ ಜಾಮೀನು ಅರ್ಜಿ ವಜಾ ಮಾಡಿದೆ. ಹೀಗಾಗಿ ನಲಪಾಡ್ ಗಳಗಳನೆ ಅಳಲು ಶುರುಮಾಡಿದ್ದಾನೆ ಎಂದು ತಿಳಿದುಬಂದಿದೆ. ನಲಪಾಡ್ ಮತ್ತು ಗ್ಯಾಂಗ್ ಜೈಲಿನಲ್ಲೇ ಕಾಲ ಕಳೆಯಬೇಕಿದೆ. ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ನಲಪಾಡ್ನಿಂದ ಹೆಲ್ಲೆಗೊಳಗಾದ ವಿದ್ವತ್ ಇನ್ನೂ ಪೊಲೀಸರ ಮುಂದೆ ಹೇಳಿಕೆ ನೀಡಲು ಸಾಧ್ಯವಾಗಿಲ್ಲ. ವಿದ್ವತ್ ಆರೋಗ್ಯ ಸ್ಥಿತಿ ಇನ್ನೂ ಸುಧಾರಿಸಿಲ್ಲ ಎಂಬ ಅಂಶವನ್ನು ಪರಿಗಣಿಸಿ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜೈಲಿಂದ ಹೊರಬಂದ ಮೇಲೆ ನಿಂಗೆ ಇದೆ ನೋಡು- ತಂದೆ ಹ್ಯಾರಿಸ್ ಗೆ ಫೋನ್ ಮಾಡಿ ನಲಪಾಡ್ ಕ್ಲಾಸ್
ನನ್ನ ಕಕ್ಷಿದಾರ (ನಲಪಾಡ್) ಅಮಾಯಕ. ಅವರ ಮೇಲೆ ರಾಜಕೀಯ ಒತ್ತಡಕ್ಕೆ ಇಲ್ಲಸಲ್ಲದ ಕೇಸ್ ಗಳನ್ನು ಹಾಕಿದ್ದಾರೆ. ಹೀಗಾಗಿ ಅವರಿಗೆ ಜಾಮೀನು ನೀಡಿ ಅಂತ ನಲಪಾಡ್ ಪರ ವಕೀಲ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದರು. ಇದಕ್ಕೆ ಪ್ರತಿಯಾಗಿ ವಾದಿಸಿದ್ದ ವಿಶೇಷ ಅಭಿಯೋಜಕರಾದ ಶ್ಯಾಮ್ ಸುಂದರ್, ಈ ಪ್ರಕರಣ ದೇಶದ ಗಮನ ಸೆಳೆದಿದೆ. ಆರೋಪಿ ಪ್ರಬಲನಾಗಿರುವುದರಿಂದ ಸಾಕ್ಷಿ ನಾಶವಾಗುವ ಸಂಭವ ಇದೆ. ಹೀಗಾಗಿ ಜಾಮೀನು ನೀಡಬಾರದು ಅಂತ ವಾದ ಮಂಡಿಸಿದ್ದರು. ಇದನ್ನೂ ಓದಿ: ನಲಪಾಡ್ಗೆ ಜೈಲೇ ಗತಿ: ಆರೋಪಿಯ ಪರ ವಕೀಲರ ವಾದ ಏನಿತ್ತು? ಕೋರ್ಟ್ ಕಲಾಪದ ಡಿಟೇಲ್ ಇಲ್ಲಿದೆ
ಪ್ರಕರಣ ಸಂಬಂಧ ಜಾಮೀನು ಅರ್ಜಿ ವಿಚಾರವಾಗಿ ಜೈಲಿನಲ್ಲಿ ಫುಲ್ ಟೆನ್ಷನ್ ಆಗಿರುವ ನಲಪಾಡ್, ಇಂದು ಬೆಳಗ್ಗೆ ಜಾಮೀನು ಕೊಡಿಸಲು ನಿನ್ನಿಂದ ಆಗುತ್ತಾ ಇಲ್ವಾ ಹೇಳು ಎಂದು ತಂದೆಗೆ ಆವಾಜ್ ಹಾಕಿದ್ದ ಎಂದು ಜೈಲಿನ ಮುಲಗಳಿಂದ ತಿಳಿದುಬಂದಿತ್ತು. ಒಂದು ವೇಳೆ ಜಾಮೀನು ಕೊಡಿಸಲು ಆಗದಿದ್ದರೆ ಹೊರಗಡೆ ನನ್ನ ಹುಡುಗರಿದ್ದಾರೆ. ಅವರಿಂದ ನಾನು ಜಾಮೀನು ತರಿಸಿಕೊಳ್ಳುತ್ತೇನೆ ಎಂದು ನಲಪಾಡ್ ತಂದೆಯನ್ನು ತರಾಟೆಗೆ ತಗೊಂಡಿದ್ದಾನೆ ಎನ್ನಲಾಗಿದೆ. ಜೈಲಿಗೆ ಬಂದು ಇಷ್ಟು ದಿನ ಆಯ್ತು. ಒಂದು ದಿನವೂ ಕೂಡ ನನ್ನನ್ನು ನೋಡಲು ಬಂದಿಲ್ಲ. ನಾನು ಜೈಲಿನಿಂದ ಹೊರ ಬಂದ ಮೇಲೆ ನಿಂಗೆ ಇದೆ ನೋಡು. ಇವತ್ತು ಜೈಲಿಗೆ ಬಂದು ನನ್ನ ನೋಡ್ಲೆಬೇಕು ಎಂದು ತನ್ನ ತಂದೆಯೊಂದಿಗೆ ಉರ್ದು ಭಾಷೆಯಲ್ಲಿ ಹೇಳಿ ಹಠ ಹಿಡಿದಿದ್ದಾನೆ ಎಂದು ತಿಳಿದುಬಂದಿತ್ತು.