ಮುಂಬೈ: ತಲೆ ಕೂದಲು ಕತ್ತರಿಸುವ ಬದಲು ಮೀಸೆ ಬೋಳಿಸಿದಕ್ಕೆ ನಡೆದ ನಡೆದ ಗಲಾಟೆ ಈಗ ಪೊಲೀಸ್ ಠಾಣೆಯವರೆಗೆ ತಲುಪಿದೆ.
ಮಹಾರಾಷ್ಟ್ರದ ನಾಗ್ಪುರ ನಿವಾಸಿ ಕಿರಣ್ ಠಾಕೂರ್ (35), ಕ್ಷೌರಿಕ ಸುನಿಲ್ ಲಕ್ಷಣೆ ವಿರುದ್ಧ ದೂರು ದಾಖಲಿಸಿದ್ದಾರೆ. ಕ್ಷೌರದಂಗಡಿಯಿಂದ ಮನೆಗೆ ಹೋದಾಗ ನನ್ನ ಮೀಸೆಯನ್ನು ಕತ್ತರಿಸಿರೋದು ಗಮನಕ್ಕೆ ಬಂದಿದೆ. ನಾನು ಕೂಡಲೇ ಸುನಿಲ್ಗೆ ಕರೆ ಮಾಡಿ, ನನ್ನ ಅನುಮತಿ ಪಡೆಯದೇ ಹೇಗೆ ಮೀಸೆಗೆ ಕತ್ತರಿ ಹಾಕಿದೆ ಎಂದು ಪ್ರಶ್ನಿಸಿದೆ. ಆದ್ರೆ ಸುನಿಲ್ ತಪ್ಪನ್ನು ಒಪ್ಪಿಕೊಳ್ಳದೇ ನನಗೆ ಬೆದರಿಕೆ ಹಾಕಿದ ಎಂದು ಕಿರಣ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಿರಣ್ ದೂರಿನನ್ವಯ ಪೊಲೀಸರು ಐಪಿಸಿ ಸೆಕ್ಷನ್ 507 (ಜೀವ ಬೆದರಿಕೆ) ಅಡಿ ಆರೋಪಿ ಸುನಿಲ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬಳಿಕ ಕ್ಷೌರಿಕ ಸಮಾಜದ ಮುಖ್ಯಸ್ಥರು ಮಾಹಿತಿ ಪಡೆದು, ಕಿರಣ್ ಅವರಿಗೆ ಯಾವುದೇ ಕ್ಷೌರಿಕ ಸೇವೆ ಒದಗಿಸಬಾರದು ಎಂದು ಆದೇಶ ಹೊರಡಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಕ್ಷೌರಿಕ ಸಮಾಜದ ಅಧ್ಯಕ್ಷ ಶರದ್ ವಾಟಕರ್, ಗ್ರಾಹಕ ಕಿರಣ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು. ಮೀಸೆ ಕತ್ತರಿಸುವ ಮುನ್ನ ಗ್ರಾಹಕನ ಅನುಮತಿ ಪಡೆಯಲಾಗಿತ್ತು. ಅಂಗಡಿಯಿಂದ ಹೊರ ಹೋದ ಗ್ರಾಹಕ ಕಿರಣ್ ಸಂಜೆ ಬಂದು ಗಲಾಟೆ ಮಾಡಿದ್ದಾನೆ. ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಹಕನ ವಿರುದ್ಧ ದೂರು ದಾಖಲಿಸಲಾಗಿದೆ. ಇಂದು(ಸೋಮವಾರ) ಘಟನೆಯನ್ನು ಖಂಡಿಸಿ ಕನಹನ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.