– ವಾಲ್ಮೀಕಿ ನಿಗಮ ಬಹುಕೋಟಿ ಹಗರಣದ ಮಾಸ್ಟರ್ಮೈಂಡ್ ನಾಗೇಂದ್ರ; ಇ.ಡಿ
ಬೆಂಗಳೂರು: ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣ (Valmiki Scam Case) ಮುಗಿದೇ ಹೋಯ್ತು ಅನ್ನೋ ಕಥೆ ಮತ್ತೆ ಚಿಗುರಿಕೊಂಡಿದೆ. ಮಾಜಿ ಸಚಿವ ಬಂಧನ ಆಯ್ತು, ಬಿಡುಗಡೆಯೂ ಆಯ್ತು. ಆದ್ರೆ, ಬಳ್ಳಾರಿ ಚುನಾವಣೆಗೆ 21 ಕೋಟಿ ರೂ. ದುರ್ಬಳಕೆಯಾಗಿದ್ದು ಹೇಗೆ…? 87 ಕೋಟಿ ಹಣದ ವಹಿವಾಟು ಎಲ್ಲೆಲ್ಲಿ ಆಯ್ತು…? ಇಡೀ ಹಗರಣದ ಎಕ್ಸಕ್ಲೂಸಿವ್ ಚಾರ್ಜ್ಶೀಟ್ ʻಪಬ್ಲಿಕ್ ಟಿವಿʼಗೆ (Public TV) ಲಭ್ಯವಾಗಿದೆ.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣದ ರೂವಾರಿಯೇ ನಾಗೇಂದ್ರ (BN Nagendra) ಎಂದು ಇಡಿ (ED) ಗಂಭೀರ ಆರೋಪ ಮಾಡಿದೆ. ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಆದ್ರೆ ನಾನು ಯಾವುದೇ ಅಪರಾಧ ಎಸಗಿಲ್ಲ. ನನಗೂ ಈ ಅವ್ಯವಹಾರಕ್ಕೂ ಸಂಬಂಧವೇ ಇಲ್ಲ ಎಂದು ವಿಚಾರಣೆ ವೇಳೆ ನಾಗೇಂದ್ರ ಹೇಳಿದ್ದಾರೆ. ಅದರ ಎಕ್ಸ್ಕ್ಲೂಸಿವ್ ಡಿಟೇಲ್ಸ್ ಇಲ್ಲಿದೆ.
ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ – ED ಚಾರ್ಜ್ಶೀಟ್ನಲ್ಲಿ ಏನಿದೆ?
A1 – ಮಾಜಿ ಸಚಿವ ನಾಗೇಂದ್ರ
1. ನಾಗೇಂದ್ರ ಇಡೀ ಹಗರಣದ ಮಾಸ್ಟರ್ ಮೈಂಡ್. ಬಹುಕೋಟಿ ಅಕ್ರಮದ ರೂವಾರಿ. ಅಕ್ರಮ ಹಣ ವರ್ಗಾವಣೆಯ ಸೂತ್ರಧಾರ. ನಿಕಟವರ್ತಿ ನೆಂಕ್ಕಟ್ಟಿ ನಾಗರಾಜ್ ಜೊತೆ ಶಾಮೀಲಾಗಿದ್ದಾರೆ. ವಾಲ್ಮೀಕಿ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಕೋಟಿ ಕೋಟಿ ಹಣ ವರ್ಗಾವಣೆ. ನಾಗೇಂದ್ರ ಕೈವಾಡದ ಬಗ್ಗೆ ನಿಗಮದ ಮಾಜಿ ಎಂಡಿ ಪದ್ಮನಾಭ ಹಾಗೂ ಅಕೌಂಟ್ ಮ್ಯಾನೇಜರ್ ಪರಶುರಾಂ ದುರ್ಗಣ್ಣನವರ್ ಹೇಳಿಕೆ ನೀಡಿದ್ದಾರೆ.
2. ವಾಲ್ಮೀಕಿ ನಿಗಮದ ಬಹುಕೋಟಿ ಹಣ ವೈಯಕ್ತಿಕ ಹಾಗೂ ಚುನಾವಣಾ ವೆಚ್ಚಕ್ಕೆ ದುರ್ಬಳಕೆ ಆಗಿದೆ. ನಾಗೇಂದ್ರ ಆಪ್ತ ಸಹಾಯಕ ವಿಜಯ್ ಕುಮಾರ್ ಗೌಡ ಮೂಲಕ ಬಳ್ಳಾರಿ ಲೋಕಸಭೆ ಚುನಾವಣೆಗೆ ದುರ್ಬಳಕೆ. ಇದಕ್ಕೆ ಪೂರಕ ಸಾಕ್ಷಿ ಎಂಬಂತೆ ವಿಜಯ ಕುಮಾರ್ ಗೌಡ ಮೊಬೈಲ್ನಲ್ಲಿ ಕ್ಯಾಶ್ ಬಂಡಲ್ಗಳು ಪತ್ತೆಯಾಗಿದ್ದವು.
3. ಬಹುಕೋಟಿ ಅಕ್ರಮ ಬಯಲಾಗಿ ತನಿಖೆ ಆರಂಭಗೊಂಡ ನಂತರ ಆರೋಪಿ ನಾಗೇಂದ್ರ ಮೂರು ಐ-ಫೋನ್ ಬದಲಾಯಿಸಿದ್ದಾರೆ. ತಾಂತ್ರಿಕ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೂರು ಫೋನ್ ಚೇಂಜ್ ಮಾಡಿದ್ದಾರೆ. ಎಫ್ಎಸ್ಎಲ್ ವರದಿಯಲ್ಲಿ ಇದೆಲ್ಲವೂ ಬಹಿರಂಗಗೊಂಡಿದೆ.
4. ಹಣ ಲಪಟಾಯಿಸುವ ಸಂಚು ಕಳೆದ ವರ್ಷವೇ ಸಿದ್ಧವಾಗಿತ್ತು. ಇದೇ ದುರುದ್ದೇಶದಿಂದ ಪರಿಚಯಸ್ಥ ಪದ್ಮನಾಭನನ್ನು ಎಂಡಿ ಆಗಿ ನೇಮಕ ಮಾಡಲಾಯ್ತು. ಹೊಸ ಬ್ಯಾಂಕ್ ಖಾತೆ ತೆರೆದು.. ಅಲ್ಲಿಗೆ ಹಣ ವರ್ಗಾಯಿಸಲು ಸೂಚಿಸಿದ್ದೇ ನಾಗೇಂದ್ರ. ನಾಗೇಂದ್ರ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ್ದು ಮಾಜಿ ಎಂಡಿ ಪದ್ಮನಾಭ.
5. ನಾಗೇಂದ್ರ ಆಪ್ತರ ಅಕೌಂಟ್ಗೆ ಲಕ್ಷ ಲಕ್ಷ ಹಣ ಜಮೆಯಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಸಮರ್ಪಕ ಉತ್ತರ ಕೊಡುವಲ್ಲಿ ನಾಗೇಂದ್ರ ವಿಫಲರಾಗಿದ್ದಾರೆ.
6. ನಿಗಮದ 187 ಕೋಟಿ ರೂ. ಹಣವನ್ನು ಯೂನಿಯನ್ ಬ್ಯಾಂಕ್ನ ಎಂಜಿ ರೋಡ್ ಶಾಖೆಯಲ್ಲಿ ತೆರೆಯಲಾಗಿದ್ದ ಅಕೌಂಟ್ ವರ್ಗಾಯಿಸಲಾಯಿತು. ಅಲ್ಲಿಂದ ಹೈದರಾಬಾದ್ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಅನಧಿಕೃತ ಖಾತೆಗೆಗಳಿಗೆ ವರ್ಗಾಯಿಸಲಾಗಿದೆ. ನಕಲಿ ಕಂಪನಿಗಳ ಹೆಸರಲ್ಲಿ ಅಕೌಂಟ್ ತೆರೆಯಲಾಗಿತ್ತು. ಆ ನಕಲಿ ಅಕೌಂಟ್ಗಳಿಂದ ಹಣ ಡ್ರಾ ಮಾಡಿಕೊಳ್ಳಲಾಗಿದೆ.
7. ಹೀಗೆ ನಗದು ರೂಪದಲ್ಲಿ ಪಡೆದ ಕೋಟ್ಯಂತರ ರೂ. ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆ ಹಾಗೂ ವೈಯಕ್ತಿಕ ವೆಚ್ಚಗಳಿಗೆ ದುರ್ಬಳಿಕೆ ಮಾಡಿಕೊಳ್ಳಲಾಗಿದೆ ಎಂದು ED ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದೆ.
ಬಳ್ಳಾರಿ ಲೋಕಸಭೆ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ:
ಅಕ್ರಮವಾಗಿ ವರ್ಗಾಯಿಸಿಕೊಂಡ ಹಣದಲ್ಲಿ 15 ಕೋಟಿ ರೂ.ಗಳಷ್ಟು ಹಣವನ್ನು ಬಳ್ಳಾರಿ ಲೋಕಸಭಾ ಚುನಾವಣೆಗೆ ವ್ಯಯಿಸಲಾಗಿದೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ಆರೋಪಿ ಸತ್ಯನಾರಾಯಣ ವರ್ಮಾ ಮೂರು ಕಂತುಗಳಲ್ಲಿ ಮಾಜಿ ಎಂಡಿ ಪದ್ಮನಾಭನಿಗೆ ಕೊಟ್ಟಿದ್ದಾನೆ.
* ಮೊದಲ ಕಂತು: ಮಾರ್ಚ್ 7 – ಆನಂದರಾವ್ ಸರ್ಕಲ್ ಹೊಟೇಲ್ ವೊಂದರಲ್ಲಿ 90 ಲಕ್ಷ ರೂ. ಕ್ಯಾಶ್ ಹಸ್ತಾಂತರ
* ಎರಡನೇ ಕಂತು: ಮಾರ್ಚ್ 7 – ನಾಗೇಂದ್ರ ರವಿ ನೆಕ್ಕಂಟಿಗೆ 1.2 ಕೋಟಿ ಕ್ಯಾಶ್ ಹಸ್ತಾಂತರ
* ಮೂರನೇ ಕಂತು: ಉಳಿದ 5.25 ಕೋಟಿ ಯಶವಂತಪುರದ ಮಾಲ್ ವೊಂದರ ಬಳಿ ಮಾಜಿ ಎಂಡಿ ಪದ್ಮನಾಭನಿಗೆ ಹಸ್ತಾಂತರ ಆಗಿದೆ.
ಸತ್ಯನಾರಾಯಣ ವರ್ಮಾ ಬಳಿಯಿಂದ 4.2 ಕೋಟಿ ಕ್ಯಾಶ್ ವೈಯಕ್ತಿಕ ಕಾರಣಗಳಿಗೆ ದುರ್ಬಳಕೆ ಮಾಡಿಕೊಳ್ಳಲಾಗಿದೆ. 4.2 ಕೋಟಿ ಹಣದಲ್ಲಿ 1.5 ಕೋಟಿ ರೂ.ಗಳಷ್ಟು ಸಾಲ ತೀರಿಸಿದ್ದಾನೆ. 1.2 ಕೋಟಿ ಕೊಟ್ಟು ಬೆಂಝ್ ಕಾರ್ ತೆಗೆದುಕೊಂಡಿದ್ದಾನೆ. ಉಳಿದ ಹಣ ರಿಯಲ್ ಎಸ್ಟೇಟ್ನಲ್ಲಿ ತೊಡಗಿಸಿದ್ದಾನೆ ಎಂಬ ಸತ್ಯ ಇಡಿ ಚಾರ್ಜ್ಶೀಟ್ನಲ್ಲಿ ಬಯಲಾಗಿದೆ.
ಎಲೆಕ್ಷನ್ ಖರ್ಚಿಗೆ ಹವಾಲಾ ಗೇಮ್!
ಆರೋಪಿ ನೆಕ್ಕಂಟಿ ನಾಗರಾಜ್ ಐ ಫೋನ್ ನಲ್ಲಿ 20 ರೂ. ನೋಟ್ ಫೋಟೋ ಪತ್ತೆಯಾಗಿದ್ದು, ಇದನ್ನು ಹವಾಲಾ ವ್ಯವಹಾರಕ್ಕೆ ಬಳಸಿದ್ದಾರೆ ಎಂದು ಇಡಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿದೆ. ತನ್ನ ಸಹೋದರ ನೆಕ್ಕಂಟಿ ರಮೇಶ್ಗೆ 20 ರೂ. ನೋಟ್ ಕೊಟ್ಟಿದ್ದ ನೆಕ್ಕಂಟಿ ನಾಗರಾಜ್, ಸತ್ಯನಾರಾಯಣ ವರ್ಮಾಗೆ ಈ ನೋಟ್ ಕೊಟ್ಟರೆ 1.5 ಕೋಟಿ ಕ್ಯಾಶ್ ಕೊಡುತ್ತಾನೆ ಅಂತ ಹೇಳಿದ್ದನಂತೆ. ಅದರಂತೆ ನೆಕ್ಕಂಟಿ ರಮೇಶ್ 20 ರೂ. ಕೊಟ್ಟು 1.5 ಕೋಟಿ ಕ್ಯಾಶ್ ಪಡೆದಿದ್ದ. 300 – 042317 ನಂಬರ್ ನ ನೋಟ್ನಲ್ಲಿ ಹವಾಲ ವಹಿವಾಟು ನಡೆಸಲಾಗಿತ್ತು. ಇದೇ ರೀತಿ ಬಹುಕೋಟಿ ಹಣವನ್ನ ಚುನಾವಣೆಗೆ ಬಳಕೆ ಮಾಡಲಾಗಿದೆ. ಇದೆಲ್ಲದರ ಅರಿವು ನಾಗೇಂದ್ರಗೆ ಇತ್ತು. ನಾಗೇಂದ್ರ ಸೂಚನೆ ಮೇರೆಗೆ ಇದೆಲ್ಲವೂ ನಡೆದಿತ್ತು ಎಂದು ನಡೆದಿತ್ತು ಎಂದು ಇಡಿ ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಿದೆ.
ಕಂತೆ ಕಂತೆ ಹಣದ ಫೋಟೋ
ಇನ್ನೂ ನಾಗೇಂದ್ರ ಪಿಎ ವಿಜಯ್ ಕುಮಾರ್ ಗೌಡಗೆ ಎಲೆಕ್ಷನ್ ಹಣ ಹಂಚುವ ಹೊಣೆ ವಹಿಸಲಾಗಿತ್ತು ಅನ್ನೋದು ಇಡಿ ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ವಿಜಯ್ ಕುಮಾರ್ ಗೌಡ ಕೂಡ ಇಡಿಗೆ ಹೇಳಿಕೆ ಕೊಟ್ಟಿದ್ದಾರೆ. ನಾಗೇಂದ್ರ ಸೂಚನೆ ಮೇರೆಗೆ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಂಚಿರುವುದಾಗಿ ಹೇಳಿಕೆ ನೀಡಿದ್ದಾರೆ. ಜಯಕುಮಾರ್ ಮೊಬೈಲ್ ಫೋನ್ನಲ್ಲಿ ಕಂತೆ ಕಂತೆ ಹಣದ ಫೋಟೋ ಸಹ ಪತ್ತೆಯಾಗಿದೆ. ಬಳ್ಳಾರಿ ಲೋಕಸಭೆ ವ್ಯಾಪ್ತಿಯ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಕೋಟಿ ಕೊಡಲಾಗಿದೆ ಎಂಬ ಪಟ್ಟಿಯೂ ಮೊಬೈಲ್ ನಲ್ಲಿ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ತುಕಾರಾಂ ಪರ ಮತದಾರರಿಗೆ ಹಣ ಹಂಚಲಾಗಿದೆ ಎಂಬ ಗಂಭೀರ ಆರೋಪವನ್ನು ಇಡಿ ಮಾಡಿದೆ. ವಾಲ್ಮೀಕಿ ನಿಗಮದ ಹಣದಲ್ಲಿ ಮತದಾರರಿಗೆ ತಲಾ 200 ರೂ. ಹಂಚಲಾಗಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಅಷ್ಟೇ ಅಲ್ಲ…
ಬಳ್ಳಾರಿ ಗ್ರಾಮಾಂತರಕ್ಕೆ 5,23,72,400 ರೂ.
ಬಳ್ಳಾರಿ ನಗರಕ್ಕೆ – 3,75,00,000 ರೂ.
ಕಂಪ್ಲಿ – 3,38,00,000 ರೂ.
ಕೂಡ್ಲಿಗಿ – 3,16,00,000 ರೂ. ಸೇರಿ ಬಳ್ಳಾರಿ ಲೋಕಸಭೆ ಚುನಾವಣೆಗೆ ವಾಲ್ಮೀಕಿ ನಿಗಮಕ್ಕೆ ಸೇರಿದ ಸುಮಾರು 15 ಕೋಟಿ ಹಣವನ್ನು ಬಳಕೆ ಮಾಡಲಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಆರೋಪಿಸಿದೆ.
ನಾಗೇಂದ್ರ ವೈಯಕ್ತಿಕ ಖರ್ಚಿಗೂ ವಾಲ್ಮೀಕಿ ನಿಮಗದ ಹಣ?
ವಾಲ್ಮೀಕಿ ನಿಗಮದ ಹಣದಲ್ಲಿ ನಾಗೇಂದ್ರ ವೈಯಕ್ತಿಕ ವೆಚ್ಚಕ್ಕೆ 16 ಲಕ್ಷ ಹಣ ಬಳಕೆ ಮಾಡಿದ್ದಾರೆ. ಫ್ಲೈಟ್ ಟಿಕೆಟ್ ಬುಕ್ಕಿಂಗ್, ಕಾರ್ ಮೇಂಟೇನೆನ್ಸ್, ವಿದ್ಯುತ್ ಬಿಲ್, ನಾಗೇಂದ್ರ ಮನೆ ನಿರ್ವಹಣೆ ಹಾಗೂ ಮನೆಗೆಲಸದ ಸಿಬ್ಬಂದಿ ಸಂಬಳಕ್ಕೆ ಉಪಯೋಗಿಸಲಾಗಿದೆ ಎಂದು ಆರೋಪಿಸಲಾಗಿದೆ.