ಬೆಂಗಳೂರು: ನಾಯಂಡಹಳ್ಳಿಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯಲ್ಲಿರುವ ಸುಮನಹಳ್ಳಿ ಫ್ಲೈ ಓವರ್ 10 ದಿನ ಬಂದ್ ಆಗಲಿದೆ. ಮೇಲ್ಸೇತುವೆಯ ರಸ್ತೆಯಲ್ಲಿ ಸುಮಾರು 6 ಅಡಿ ಅಗಲದಷ್ಟು ಗುಂಡಿ ಬಿದ್ದ ಹಿನ್ನೆಲೆಯಲ್ಲಿ ಸಂಚಾರವನ್ನು ನಿಷೇಧಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಈ ಗುಂಡಿ ಅಲ್ಲದೇ ಮೇಲ್ಸೇತುವೆ ಹಲವು ಗುಂಡಿಗಳು ಎದ್ದಿದೆ. ಈ ಹಿನ್ನೆಲೆಯಲ್ಲಿ ದುರಸ್ತಿ ಮಾಡಲು 10 ದಿನಗಳ ಕಾಲ ಮೇಲ್ಸೇತುವೆ ಮೇಲೆ ಒಂದು ಬದಿಯ ಸಂಚಾರವನ್ನು ಬಂದ್ ಮಾಡಲಾಗುತ್ತದೆ. ಗೊರಗುಂಟೆಪಾಳ್ಯದಿಂದ ನಾಯಂಡಹಳ್ಳಿ ಕಡೆ ಹೋಗುವ ವಾಹನಗಳು ಎಂದಿನಂತೆ ಫ್ಲೈಓವರ್ ಮೇಲೆ ಸಂಚರಿಸಬಹುದಾಗಿದೆ.
ಸುಮನಹಳ್ಳಿ ಸಿಗ್ನಲ್ನಲ್ಲಿ ವಿಜಯನಗರ, ಮಾರುಕಟ್ಟೆ ಕಡೆಯಿಂದ ಸುಂಕದಕಟ್ಟೆ, ನಾಯಂಡಹಳ್ಳಿ ಕಡೆಯಿಂದ ತುಮಕೂರು ರಸ್ತೆಗೆ ವಾಹನಗಳು ಸಂಚರಿಸುತ್ತವೆ. ಭಾರೀ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ 2007ರಲ್ಲಿ ಬಿಡಿಎ ಫ್ಲೈಓವರ್ ಕಾಮಗಾರಿಯ ಗುತ್ತಿಗೆಯನ್ನು ಚೆನ್ನೈ ಮೂಲದ ಇಸಿಸಿಐ ಕಂಪನಿಗೆ ನೀಡಿತ್ತು. 2010ರಲ್ಲಿ ಉದ್ಘಾಟನೆಯಾದ ಬಳಿಕ 2016ರವರೆಗೆ ಬಿಡಿಎ ನಿರ್ವಹಣೆ ಮಾಡಿ ನಂತರ ಬಿಬಿಎಂಪಿಗೆ ನೀಡಿತ್ತು. ಆದರೆ ಬಿಬಿಎಂಪಿ ಅಧಿಕಾರಿಗಳು ನಿರ್ವಹಣೆ ಸರಿ ಮಾಡದ ಪರಿಣಾಮ ರಸ್ತೆ ಗುಂಡಿ ಬಿದ್ದಿದೆ. ಇದನ್ನು ಓದಿ: ಸುಮನಹಳ್ಳಿ ಬ್ರಿಡ್ಜ್ನಲ್ಲಿ ಗುಂಡಿ- ಪೊಲೀಸರ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರೀ ದುರಂತ
ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಸ್ವತಃ ಅಧಿಕಾರಿಗಳ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮೇಲ್ಸೇತುವೆಯನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುರಿಂದ ಸಮಸ್ಯೆ ಸೃಷ್ಟಿಯಾಗಿದೆ. ಸೇತುವೆ ಮೇಲೆ ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದ ಇರುವುದರಿಂದ ಗುಂಡಿ ಬಿದ್ದಿದೆ. ಬಿಬಿಎಂಪಿ ಅಧಿಕಾರಿಗಳು ಕಳೆದ 4 ವರ್ಷಗಳಿಂದ ಸೇತುವೆ ನಿರ್ವಹಣೆ ಮಾಡಿರಲಿಲ್ಲ. ಈ ಬ್ರಿಡ್ಜ್ ನಿರ್ಮಾಣ ಮಾಡಿದ ಚೆನ್ನೈ ಮೂಲದ ಖಾಸಗಿ ಸಂಸ್ಥೆ ಇಸಿಸಿಐ 3 ರಾಜ್ಯಗಳಲ್ಲಿ ಕಪ್ಪು ಪಟ್ಟಿಯಲ್ಲಿದೆ. ಈ ಸೇತುವೆ ಹಾಳಾಗಳು ಅಧಿಕಾರಿಗಳ ಬೇಜಾವಾಬ್ದಾರಿ ಕಾರಣ ಎಂದು ನೇರವಾಗಿ ಹೇಳಿದ್ದಾರೆ.
ಶುಕ್ರವಾರ ರಾತ್ರಿ ಗುಂಡಿ ಬಿದ್ದಿದ್ದರೂ ವಾಹನ ದಟ್ಟನೆ ಹೆಚ್ಚಿದ್ದ ಕಾರಣ ಬ್ಯಾರಿಕೇಡ್ ಹಾಕಿ ರಸ್ತೆಯ ಒಂದು ಬದಿಯಲ್ಲಿ ಸಂಚಾರ ನಡೆಸಲು ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಅನುಮತಿ ನೀಡಿದ್ದರು. ವಾಹನಗಳ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ ಫ್ಲೈ ಓವರ್ ಮೇಲಿನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು. ಈಗ ವಾಹನಗಳು ಸೇತುವೆಯ ಅಡಿ ಭಾಗದಿಂದ ಸಂಚರಿಸುತ್ತಿವೆ.