ಮಂಗಳೂರು ವಿಚಾರವಾದಿಯ ಓಪನ್ ಚಾಲೆಂಚ್ ಸ್ವೀಕರಿಸಿದ ನಾಗಪಾತ್ರಿ

Public TV
2 Min Read
Nagaraj bhat MNG Narendra Nayak 1

ಉಡಪಿ: ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹಾಕಿದ್ದ ಬಹಿರಂಗ ಸವಾಲನ್ನು ನಾನು ಸ್ವೀಕರಿಸಿದ್ದೇನೆ ಎಂದು ತೀರ್ಥಹಳ್ಳಿಯ ನಾಗಪಾತ್ರಿ ನಾಗರಾಜ್ ಭಟ್ ಹೇಳಿದ್ದಾರೆ.

ನಾನು ನಾಗ ದೇವರ ಆರಾಧಕ. ದೇವತಾ ಕೆಲಸ ಮಾಡುತ್ತಿದ್ದು, ಕರೆನ್ಸಿ ಹಾಗೂ ನಂಬರ್ ಹೇಳುವ ಕೆಲಸ ಮಾಡುತ್ತಿಲ್ಲ. ಅವರು ನಾಗ ಪ್ರತಿಮೆ ಸವಾಲು ಹಾಕಿದರೆ ನಾನು ಗುರುತಿಸಲು ಸಿದ್ಧ. ಆದರೆ ಕರೆನ್ಸಿ ಹಾಗೂ ನಂಬರ್ ಹುಡುಕುವುದು ಕಾನೂನು ವಿರೋಧಿ ಚಟುವಟಿಕೆ ಆಗುತ್ತದೆ. ಒಂದು ವೇಳೆ ಹೀಗೆ ಮಾಡಿದರೆ ಮುಂದೆ ವಸ್ತುಗಳನ್ನು ಕಳೆದುಕೊಂಡವರು ಬರುತ್ತಾರೆ ಎಂದು ಹೇಳಿದರು.

ಮನೆ ನಿರ್ಮಾಣದ ವೇಳೆ ವಿವಿಧ ಮಣ್ಣುಗಳನ್ನು ಬಳಕೆ ಮಾಡುತ್ತಾರೆ. ಹೀಗಾಗಿ ಉಡುಪಿಯಲ್ಲಿ ಹೊರತೆಗೆದ ನಾಗ ಕಲ್ಲಿಗೆ ಬೇರೆ ಮಣ್ಣು ಹತ್ತಿತ್ತು. ಪೂಜಾ ಕಾರ್ಯ ನಿಮಿತ್ತ ಸದ್ಯಕ್ಕೆ ಈ ಸವಾಲು ಸ್ವೀಕರಿಸಲು ಆಗಲ್ಲ. ಆದರೆ ಫೆಬ್ರವರಿ ಬಳಿಕ ಸವಾಲು ಸ್ವೀಕರಿಸುತ್ತೇನೆ. ಹೀಗಾಗಿ ಅವರು ಇಂದಿನಿಂದಲೇ ಅವರು ಆಸ್ತಿ ಹಾಗೂ ಹಣ ವರ್ಗಾವಣೆ ನಿಲ್ಲಿಸಬೇಕು. ನಾನು ನಾಗ ಪ್ರತಿಮೆ ಗುರುತಿಸಿದ ತಕ್ಷಣವೇ ಅವರು ಎಲ್ಲ ಆಸ್ತಿಯನ್ನು ನನಗೆ ಬಿಟ್ಟುಕೊಡಬೇಕು ಎಂದು ತಿಳಿಸಿದ್ದಾರೆ.

udp naga udbava collage 2 copy

ಸವಾಲು ಏನು?:
ನಾಗಪಾತ್ರಿ ಕೊಡುವ ಕಲ್ಲನ್ನು ಒಂದೇ ರೀತಿಯ ಹತ್ತು ಬಾಕ್ಸ್ ಗಳನ್ನಿಟ್ಟು ಒಂದರಲ್ಲಿ ಇಡುತ್ತೇನೆ. ಯಾವ ಬಾಕ್ಸ್ ನಲ್ಲಿ ನಾಗ ಕಲ್ಲು ಇದೆ ಎನ್ನುವುದನ್ನು ಹೇಳಬೇಕು. ಮತ್ತೊಂದು ವಿಧಾನವೆಂದರೆ ಕಲ್ಲಿನ ಜೊತೆಗೆ ಒಂದು ಕರೆನ್ಸಿ ನೋಟನ್ನು ಇಡುತ್ತೇನೆ. ನಾಗನಪಾತ್ರಿ ಸರಿಯಾಗಿ ಗ್ರಹಿಸಿ, ನಾಗನ ಕಲ್ಲು ಮತ್ತು ಕರೆನ್ಸಿ ನೋಟಿನ ಸೀರಿಯಲ್ ನಂಬರ್ ಹೇಳಿದರೆ ನನ್ನಲ್ಲಾ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ ಎಂದು ನರೇಂದ್ರ ನಾಯಕ್ ಓಪನ್ ಚಾಲೆಂಜ್ ಮಾಡಿದ್ದರು.

ಅವರು ನಾಗ ಕಲ್ಲು ಇರುವ ಚಿತ್ರವನ್ನು ಬಿಡಿಸಿದ್ದರು. ಹೀಗಾಗಿ ಕರೆನ್ಸಿ ನಂಬರ್ ಹೇಳುವ ಸವಾಲು ಹಾಕಿದ್ದೇನೆ. ಒಂದು ವೇಳೆ ನಾಗನ ಕಲ್ಲು ಗುರುತಿಸಿದರೆ ಅದನ್ನು ಅದ್ಭುತವೆಂದು ಒಪ್ಪಿಕೊಳ್ಳುತ್ತೇನೆ. ಮನೆಯ ಒಳಗೆ ಆರು ಅಡಿ ತಳಪಾಯದಲ್ಲಿ ಇರುವ ನಾಗನ ಕಲ್ಲನ್ನು ತೆಗೆದವರಿಗೆ ಇದೇನು ದೊಡ್ಡ ಸವಾಲು ಅಲ್ಲ. ಅಂಥ ಶಕ್ತಿಯಿದ್ದರೆ ಸವಾಲು ಸ್ವೀಕರಿಸಲಿ ಅಂತಾ ಹೇಳಿದ್ದರು.

udp naga udbava collage copy

ಒಂದು ವೇಳೆ ಅವರು ಸವಾಲಿನಲ್ಲಿ ಗೆದ್ದರೆ ನನ್ನ ಆಸ್ತಿಯನ್ನು ಅವರಿಗೆ ಬರೆದುಕೊಡುತ್ತೇನೆ. ಜೊತೆಗೆ ಸಾಯುವವರೆಗೂ ಅವರ ಗುಲಾಮನಾಗಿ ಇರುತ್ತೇನೆ. ಅವರು ಸೋತರೆ ಜನರು ಸತ್ಯೆ ಏನು ಎನ್ನುವುದನ್ನು ಅರಿಯುತ್ತಾರೆ ಎಂದು ನರೇಂದ್ರ ನಾಯಕ್ ಹೇಳಿದ್ದಾರೆ.

ನಾಗಪಾತ್ರಿ ಯಾರು?
ತೀರ್ಥಹಳ್ಳಯ ನಾಗಪಾತ್ರಿ ನಾಗರಾಜ್ ಭಟ್ ಅವರು ಉಡುಪಿ ಜಿಲ್ಲೆ ಮುದ್ರಾಡಿ ಗ್ರಾಮದ ಬರ್ಸಬೆಟ್ಟು ಮನೆಯಲ್ಲಿ ನಾಗನ ಕಲ್ಲನ್ನು ತೆಗೆದು ತೋರಿಸಿ ಅಚ್ಚರಿಗೆ ಮೂಡಿಸಿದ್ದರು. ಇದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆಯೇ ಮೈಸೂರು, ತುಮಕೂರು ಇನ್ನೂ ಹಲವೆಡೆ ಒಂದೇ ತರಹದ ಪ್ರತಿಮೆಗಳು ತೆಗೆದಿದ್ದಾರೆ. ಸುಮಾರು 7-8 ವರ್ಷದಿಂದ ಈ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎನ್ನಲಾಗಿದೆ.

UDP naga udbhava 1 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *