ಮಂಡ್ಯ: ಇಡೀ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಮಂಡ್ಯದ ನಾಗಮಂಗಲ ಗಲಭೆ (Nagamangala Communal Violence) ಪ್ರಕರಣಕ್ಕೆ ಈಗ ಮೆಗಾ ಟ್ವಿಸ್ಟ್ ಸಿಕ್ಕಿದೆ. ಗಲಭೆ ಬಗ್ಗೆ ದೂರು ನೀಡಿದ್ದ ಪೊಲೀಸ್ ಅಧಿಕಾರಿಯನ್ನೇ ಅಮಾನತುಗೊಳಿಸಲಾಗಿದೆ.
ನಾಗಮಂಗಲ ಕೋಮುಗಲಭೆಗೆ ಬಳಿಕ ದೂರು ನೀಡಿದ್ದ ಇಲ್ಲಿನ ಟೌನ್ ಠಾಣೆಯ ಪಿಎಸ್ಐ (Nagamangala Psi) ಬಿ.ಜೆ.ರವಿ ಅವರನ್ನು ಅಮಾನತು ಮಾಡಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶಿಸಿದ್ದಾರೆ. ಇದನ್ನೂ ಓದಿ: ಕಿಡಿಗೇಡಿಗಳ ಅಟ್ಟಹಾಸಕ್ಕೆ ನಲುಗಿದ ನಾಗಮಂಗಲ – ಬೀದಿ ಪಾಲಾದ ಬದುಕು.. ಒಟ್ಟು 2.66 ಕೋಟಿ ನಷ್ಟ!
ಗಣೇಶ ವಿಸರ್ಜನೆ ಮಾಡುತ್ತಿದ್ದವರ ಪ್ರಚೋದನೆಯಿಂದ ಗಲಭೆ ಸೃಷ್ಟಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು ಪಿಎಸ್ಐ ರವಿ ಅವರನ್ನ ಅಮಾನತುಗೊಳಿಸಲಾಗಿದೆ. ಅಲ್ಲದೇ ಪಿಎಸ್ಐ ಜೊತೆಗೆ ಠಾಣೆಗೆ ಗುಪ್ತ ಮಾಹಿತಿ ಸಂಗ್ರಹ ಪೇದೆ ರಮೇಶ್ ಅವರನ್ನೂ ಅಮಾನತು ಮಾಡಲಾಗಿದೆ. ಕೋಮು ಗಲಭೆ ಪ್ರಕರಣದಲ್ಲಿ ಒಟ್ಟು ನಾಲ್ವರು ಅಧಿಕಾರಿಗಳ ತಲೆತಂಡವಾಗಿದೆ. ಡಿವೈಎಸ್ಪಿ ಸುಮಿತ್, ಪಿಐ ಅಶೋಕ್ ಅವರನ್ನು ಈ ಮೊದಲೇ ಅಮಾನತುಗೊಳಿಸಲಾಗಿತ್ತು. ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ ಕೇಸ್- ಎಲ್ಲಾ 55 ಆರೋಪಿಗಳಿಗೆ ಜಾಮೀನು ಮಂಜೂರು
55 ಆರೋಪಿಗಳಿಗೆ ಜಾಮೀನು ಮಂಜೂರು
ನಾಗಮಂಗಲ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದ ಎಲ್ಲಾ ಆರೋಪಿಗಳಿಗೆ ಮಂಡ್ಯದ (Mandya) ಒಂದನೇ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ಕಳೆದ ಸೆಪ್ಟೆಂಬರ್ 27ರಂದು ಷರತ್ತುಬದ್ಧ ಜಾಮೀನು (Bail) ಮಂಜೂರು ಮಾಡಿತ್ತು. ತಲಾ ಒಂದು ಲಕ್ಷ ರೂ. ಮೌಲ್ಯದ ಬಾಂಡ್, ಪ್ರತೀ ಭಾನುವಾರ ಠಾಣೆಗೆ ತೆರಳಿ ಸಹಿ ಹಾಕಬೇಕು. ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು, ಅಪರಾಧಿ ಕೃತ್ಯದಲ್ಲಿ ಭಾಗಿಯಾಗದಂತೆ ಕೋರ್ಟ್ ಆರೋಪಿಗಳಿಗೆ ಷರತ್ತು ವಿಧಿಸಿತ್ತು.