ಬೆಂಗಳೂರು: ರೌಡಿಶೀಟರ್ ನಾಗರಾಜ್ ಅಲಿಯಾಸ್ ನಾಗ ಹದಿನೈದು ದಿನಗಳ ಅಜ್ಞಾತ ಸ್ಥಳದಿಂದ ಹಿಂದೆ ಸಿಡಿಯೊಂದನ್ನ ಬಿಡುಗಡೆ ಮಾಡಿದ್ದು ಗೊತ್ತೆ ಇದೆ. ಈಗ ಮತ್ತೊಂದು ಸಿಡಿ ಬಿಡುಗಡೆ ಮಾಡಿದ್ದಾನೆ.
ಈ ಸಿಡಿಯಲ್ಲಿ ಬಿಜೆಪಿ ನಾಯಕರೊಬ್ಬರ ವಿರುದ್ಧ ಅರೋಪ ಮಾಡಿದ್ದಾನೆ. ನಾನು ಮತ್ತು ಬಿಜೆಪಿ ಸಂಸದ ಪಿಸಿ ಮೋಹನ್ ನಡುವೆ 15 ವರ್ಷಗಳ ಸ್ನೇಹ ಸಂಬಂಧವಿದೆ. ನಾನು ಕಷ್ಟದಲ್ಲಿರುವಾಗ ನಮ್ಮ ಸ್ನೇಹವನ್ನ ಇಲ್ಲ ಅಂತಾ ಹೇಳುತ್ತಿದ್ದಾರೆ. ನಿಮಗೆ ನಮ್ಮ ಸ್ನೇಹದ ಬಗ್ಗೆ ಅನುಮಾನವಿದ್ದರೆ ನನ್ನ ಮೊಬೈಲ್ ಕಾಲ್ ಲಿಸ್ಟ್ ತೆಗೆದು ನೋಡಿ ಎಂದು ಹೊಸದಾಗಿ ರೀಲಿಸ್ ಮಾಡಿರುವ ಸಿಡಿಯಲ್ಲಿ ಹೇಳಿದ್ದಾನೆ.
ಜೊತೆಗೆ ತನ್ನ ಶರಣಾಗತಿಗೆ ಹಲವಾರು ಷರತ್ತುಗಳನ್ನ ಸಹ ಸಿಡಿಯಲ್ಲಿ ಹೇಳಿಕೊಂಡಿದ್ದಾನೆ. ಗೃಹ ಸಚಿವ ಪರಮೇಶ್ವರ್ ಅವರನ್ನು ಹಾಡಿ ಹೊಗಳಿದ್ದಾನೆ. ಗೃಹ ಸಚಿವ ಪರಮೇಶ್ವರ್ ಅವರು ಹೂ ಅಂದ್ರೆ ಸಾಕು. 10 ನಿಮಿಷದಲ್ಲಿ ಮುಂದೆ ಬಂದು ನಿಂತುಕೊಳ್ತೀನಿ. ಆದ್ರೆ ಸುಳ್ಳು ಪ್ರಕರಣಗಳನ್ನ ರದ್ದು ಮಾಡಬೇಕು. ನೀವು ನನ್ನನ್ನು ಹುಡುಕುವ ಅವಶ್ಯಕತೆಯಿಲ್ಲ. ಪರಮೇಶ್ವರ್ ಅವರು ಕರೆದ್ರೆ ನಾನೇ ಬರುತ್ತೇನೆ ಅಂತ ಹೇಳಿದ್ದಾನೆ.
ಇದೇ ವೇಳೆ ಸಿಎಂ ಕುರಿತು ಮಾತನಾಡಿದ ನಾಗ, ‘ನಮ್ಮ ಸಿಎಂ’ ಸಿದ್ದರಾಮಯ್ಯ ಅವರಿಗೆ ಒಂದು ಮಾತು ಹೇಳ್ತೀನಿ. ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿಗಳು ಮಾಡ್ತಿರುವ ಮೋಸವನ್ನ, ಸುಳ್ಳು ಕೇಸ್ಗಳನ್ನ ನಿಲ್ಲಿಸಿ. ಹೇಳೋಕಾಗಲ್ಲ, ನಾಳೆ ನನ್ನ ಮನಸ್ಸು ಕೆಟ್ಟು ವಿಧಾನಸೌಧದ ಮುಂದೆ ಏನಾದ್ರೂ ಮಾಡ್ಕೊಂಡ್ರೆ ನಿಮ್ಮ ಹೆಸರೇ ಕೆಡೋದು ಎಂದಿದ್ದಾನೆ.