‘ಪುಷ್ಪ’ (Pushpa) ಸೇರಿದಂತೆ ತೆಲುಗಿನ ಸಾಕಷ್ಟು ಸಿನಿಮಾಗಳನ್ನ ನಿರ್ಮಾಣ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ (Mytri Movie Makers) ನಿರ್ಮಾಣ ಸಂಸ್ಥೆ ಮೇಲೆ ಐಟಿ ದಾಳಿ ನಡೆದ ಬೆನ್ನಲ್ಲೇ ನಿರ್ಮಾಪಕ ನವೀನ್ ಯೆರ್ರಿನೇನಿ (Naveen Yerrineni) ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದನ್ನೂ ಓದಿ:ರಜನಿಕಾಂತ್ ಜೊತೆ ನಟಿಸುವ ಚಾನ್ಸ್ ಸಿಕ್ಕಿದ್ದು ಹೇಗೆ ಎಂದು ಅಸಲಿ ವಿಚಾರ ಬಿಚ್ಚಿಟ್ಟ ಅವಿನಾಶ್
ಮೈತ್ರಿ ಮೂವೀಸ್ ಕಚೇರಿ, ನಿರ್ಮಾಪಕರ ಮನೆಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಸತತ ಮೂರು ದಿನಗಳಿಂದಲೂ ದಾಳಿ, ಪರಿಶೀಲನೆ ನಡೆಯುತ್ತಲೇ ಇದ್ದು, ಶನಿವಾರದಂದು (ಏ.22) ತನಿಖೆ ವೇಳೆ ನಿರ್ಮಾಪಕ ನವೀನ್ ಯೆರ್ರಿನೇನಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಸದ್ಯ ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸಿನಿಮಾಗಳ ಮೇಲೆ ಹೂಡಿಕೆಗೆ ಅಕ್ರಮವಾಗಿ 700 ಕೋಟಿ ಹಣವನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ಮೈತ್ರಿ ಮೂವಿ ಮೇಕರ್ಸ್ ಮೇಲಿದ್ದು, ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಐಟಿ ಪ್ರಕರಣ ದಾಖಲಿಸಿಕೊಂಡಿದೆ ಎನ್ನಲಾಗುತ್ತಿದೆ.
ಅಲ್ಲು ಅರ್ಜುನ್ -ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ’ ಸಿನಿಮಾ ಸಕ್ಸಸ್ ಬಳಿಕ ಪುಷ್ಪ 2, ವಿಜಯ್ ದೇವರಕೊಂಡ-ಸಮಂತಾ ನಟನೆಯ ಖುಷಿ, ಮಲಯಾಳಂನಲ್ಲಿ ನಟಿಗರ್ ತಿಲಗಂ, ಪವನ್ ಕಲ್ಯಾಣ್ ನಟನೆಯ ಭಗಂತ್ ಸಿಂಗ್, ಎನ್ಟಿಆರ್-ಪ್ರಶಾಂತ್ ನೀಲ್ ಕಾಂಬಿನೇಶನ್ ಸಿನಿಮಾ, ರಾಮ್ ಚರಣ್ ನಟನೆಯ 16ನೇ ಸಿನಿಮಾ. ಅಲ್ಲು ಅರ್ಜುನ್-ಸಂದೀಪ್ ರೆಡ್ಡಿ ವಂಗಾ ಕಾಂಬಿನೇಶನ್ ಸಿನಿಮಾಗಳನ್ನು ಒಟ್ಟೊಟ್ಟಿಗೆ ನಿರ್ಮಾಣ ಮಾಡುತ್ತಿದ್ದಾರೆ.