ಮೈಸೂರು: ತಮ್ಮ ಮನಸಿನ ಮಾತನ್ನು ಹಂಚಿಕೊಂಡು ಜನರ ಜೊತೆ ಬೆರೆಯಲು ಮೈಸೂರಿನ ಯದುವಂಶದ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ‘ಭೇರುಂಡ’ ಎಂಬ ಹೆಸರಿನ ಬ್ಲಾಗ್ ಆರಂಭಿಸಿದ್ದಾರೆ.
ಇಷ್ಟು ದಿನ ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಫೋಟೋಗಳನ್ನು ಅಪ್ಲೋಡ್ ಮಾಡಿ ಜನರ ಜೊತೆ ಸಂಪರ್ಕದಲ್ಲಿದ್ದ ಮಹಾರಾಜರು ಈಗ ತಮ್ಮ ಬರವಣಿಗೆಯ ಮೂಲಕ ಜನರ ಜೊತೆ ಬೆರೆಯಲು ಮುಂದಾಗಿದ್ದು ವೆಬ್ಸೈಟ್ನಲ್ಲಿ ಬ್ಲಾಗ್ ಆರಂಭಿಸಿ ಇವತ್ತು ಮೊದಲ ಸುದ್ದಿಪತ್ರವನ್ನು ಪ್ರಕಟಿಸಿದ್ದಾರೆ.
ದಸರಾ ವಿಶೇಷಾಂಕದ ಸುದ್ದಿಪತ್ರ ಬಿಡುಗಡೆ ಮಾಡಿದ ಮಹಾರಾಜರು, ಇದು ಉದ್ಘಾಟನೆಯ ಸುದ್ದಿ ಪತ್ರ ಎಂದು ಬ್ಲಾಗ್ ನಲ್ಲಿ ಹೇಳಿದ್ದಾರೆ. ಉದ್ಘಾಟನಾ ಪತ್ರದ ಹೆಸರಿನಲ್ಲಿ ಮೊದಲ ಪತ್ರ ಒಂದನ್ನು ಬರೆದಿದ್ದಾರೆ. ಈ ಪತ್ರ ನಿಮಗೆಲ್ಲ ನಮ್ಮ ಪ್ರಾಥಮಿಕ ಮಾಹಿತಿ ನೀಡಲಿದೆ. ರಾಜಮನೆತನದ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ತಿಳಿಸಲಿದೆ. ಈ ಬ್ಲಾಗ್ ಮೂಲಕ ನಮ್ಮ ಕಾರ್ಯಕ್ರಮಗಳು ನಿಮಗೆ ತಿಳಿಯಲಿದೆ ಎಂದು ಬರೆದಿದ್ದಾರೆ.
ರಾಜಮನೆತನದ ಕಾರ್ಯಕ್ರಮಗಳಲ್ಲಿ ಈ ಸೇವೆಯು ಒಂದು ಭಾಗ. ನಾವು ನೀವು ಪರಸ್ಪರ ಅರ್ಥ ಮಾಡಿಕೊಳ್ಳಲು ಈ ಪತ್ರ ನಾಂದಿಯಾಗಲಿದೆ. ನನಗೆ ಬರವಣಿಗೆ ಇಷ್ಟವಾಗಿದ್ದರಿಂದ ನನ್ನ ಆಲೋಚನೆಗಳನ್ನು ಈ ಮೂಲಕ ಹಂಚಿಕೊಳ್ಳಲಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಬ್ಲಾಗ್ ನೋಡಲು ಕ್ಲಿಕ್ ಮಾಡಿ: www.ykcwadiyar.in
ಇದನ್ನೂ ಓದಿ: ಪತ್ನಿ ಹೆಸ್ರಲ್ಲಿ ಸೋಷಿಯಲ್ ಮೀಡಿಯಾ ಖಾತೆ ತೆರೆಯೋ ಮಂದಿಗೆ ಯದುವೀರ್ ಖಡಕ್ ವಾರ್ನಿಂಗ್