ಮೈಸೂರು: ನಾನು ಈಶ್ವರಪ್ಪ ವೆಜ್, ಸಿದ್ದರಾಮಯ್ಯ ಮಾತ್ರ ನಾನ್ವೆಜ್ ಎಂದು ಮಾಜಿ ಸಚಿವ ಎಚ್. ವಿಶ್ವನಾಥ್ ಹೇಳಿದರು.
ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಎಚ್.ವಿಶ್ವನಾಥ್ ಈ ರೀತಿ ಹೇಳಿದರು. ನಾನು ಹಾಗೂ ಈಶ್ವರಪ್ಪ ಭಾಷಣ ಮುಗಿಸಿ ವೆಜ್ ಊಟಕ್ಕೆ ಹೋಗುತ್ತೇವೆ. ಸಿದ್ದರಾಮಯ್ಯ ಈಗಲೂ ನಾನ್ ವೆಜಿಟೇರಿಯನ್ ಇದ್ದಾರೆ ಎಂದು ತಿಳಿಸಿದ್ದಾರೆ.
ನಾನು ಈಶ್ವರಪ್ಪ ಅವರ ಸಹವಾಸ ಮಾಡಿ ಬಾಡೂಟ, ಬಳ್ಳೆ ಬಿಟ್ಟಿದ್ದೇನೆ. ಸಿದ್ದರಾಮಯ್ಯ ಈಗಲೂ ಬಾಡೂಟ, ಬಳ್ಳೆ ಅಭ್ಯಾಸ ಇಟ್ಟುಕೊಂಡಿದ್ದಾರೆ. ಅವರಿಗಾಗಿ ಸ್ಥಳೀಯ ಕಾಂಗ್ರೆಸ್ ನಾಯಕಿ ಐಶ್ವರ್ಯ ಹಾವು ಬತ್ತಿ ಮೀನು ಊಟ ಮಾಡಿಸಿದ್ದಾರೆ. ಹೀಗಾಗಿ ನಾವು ಕೆಆರ್ ನಗರದ ನಮ್ಮ ಮನೆಯಲ್ಲಿ ಊಟ ಮಾಡುತ್ತೇವೆ. ನೀವೆಲ್ಲ ವಿಶ್ವನಾಥ್ ಹಾಗೂ ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಬಿಟ್ಟು ಹೋದರು ಎಂದು ತಿಳಿದುಕೊಳ್ಳಬಾರದು ಎಂದು ಕಾರ್ಯಕ್ರಮದ ಮಧ್ಯೆ ತೆರಳುತ್ತಿರುವುದಕ್ಕೆ ಎಚ್. ವಿಶ್ವನಾಥ್ ಸಮಜಾಯಿಷಿ ನೀಡಿದರು.
ತಮ್ಮ ಭಾಷಣದಲ್ಲಿ ಸಿದ್ದರಾಮಯ್ಯರನ್ನು ಹೊಗಳಿದ ವಿಶ್ವನಾಥ್, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ವಿಶೇಷ ನೆರವು ನೀಡಿದರು. ಸುಮಾರು 262 ಕೋಟಿ ರೂ.ಗಳ ಪ್ಯಾಕೇಜ್ ಕೊಟ್ಟಿದ್ದಾರೆ. ರಾಜಕಾರಣದಲ್ಲಿ ತಿರುವುಗಳು ಬರುತ್ತವೆ, ಹೋಗುತ್ತವೆ. ಕಾವೇರಿ ನದಿಯ ಹರಿವಿನಲ್ಲಿ ತಿರುವುಗಳು ಸಹಜ. ಅದೇ ರೀತಿ ನಾವು ವೇದಿಕೆಯಲ್ಲಿ ಸೇರಿದ್ದೇವೆ ಎಂದರು.
ಇದೇ ವೇಳೆ ಸಂಗೊಳ್ಳಿ ರಾಯಣ್ಣ ಸ್ವತಂತ್ರ ಸೇನಾನಿ. ಗಣರಾಜ್ಯದ ದಿನ ರಾಯಣ್ಣ ಅವರನ್ನು ನಂದಗಢದಲ್ಲಿ ಗಲ್ಲಿಗೆ ಏರಿಸಲಾಯಿತು. ನಂದಗಢವನ್ನು ಸ್ಮಾರಕವಾಗಿ ಅಭಿವೃದ್ಧಿ ಪಡಿಸುವ ಕಾರ್ಯಗಳು ನಡೆಯುತ್ತಿವೆ ಎಂದು ತಿಳಿಸಿದರು.