ಮೈಸೂರು: ಬಿಜೆಪಿಗಾಗಿ ನಾನು ಕಳಂಕ ಹೊತ್ತಿದ್ದೇನೆ, ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ ಎಂದು ಮಾಜಿ ಸಚಿವ ಎಚ್ ವಿಶ್ವನಾಥ್ ಹೇಳಿದ್ದಾರೆ.
ಯಶವಂತಪುರ ಶಾಸಕರಾದ ಎಸ್.ಟಿ ಸೋಮಶೇಖರ್ ಅವರು, ಯಾವುದೇ ಕಾರಣಕ್ಕೂ ಸೋತವರಿಗೆ ಮಂತ್ರಿ ಸ್ಥಾನ ನೀಡಲು ಆಗುವುದಿಲ್ಲ. ಆ ರೀತಿ ಅವರು ಒತ್ತಡ ಹಾಕಲು ಆಗುವುದಿಲ್ಲ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಸೋತಿರುವ ಲಕ್ಷ್ಮಣ್ ಸವದಿಗೆ ಡಿಸಿಎಂ ಸ್ಥಾನ ನೀಡಿಲ್ವಾ? ನಾನೇನೂ ಡಿಸಿಎಂ ಸ್ಥಾನ ಕೇಳ್ತಿದ್ದೇನಾ? ಕೇಳ್ತಿರೋದು ಮಂತ್ರಿ ಸ್ಥಾನ ಮಾತ್ರ ಎಂದು ತಿರುಗೇಟು ನೀಡಿದರು.
ಸೋತ ಮೇಲೂ ಅರುಣ್ ಜೆಟ್ಲಿ ಅನುಭವ ಬಳಕೆ ಆಗಲಿಲ್ವಾ?. ಹಾಗಾಗಿ ನಾನು ಹಿರಿಯ ಈ ಹಿಂದೆ ಸಾಕಷ್ಟು ಬಾರಿ ಮಂತ್ರಿಯಾಗಿ ಕೆಲಸದ ಮಾಡಿದ ನನ್ನ ಅನುಭವವನ್ನು ಬಳಕೆ ಮಾಡಿಕೊಳ್ಳಿ ಅತಿದ್ದೇನೆ ಅಷ್ಟೇ. ಸೋತವರು ಸ್ಥಾನ ಕೇಳುವ ನೈತಿಕತೆ ಅಲ್ಲ ಎನ್ನುವುದು ಗೊತ್ತಿದೆ. ಆದರೆ ಇವರಿಗಾಗಿ ಕಳಂಕ ಹೊತ್ತಿದ್ದೇನೆ. ಅಲ್ಲದೆ ಯಡಿಯೂರಪ್ಪ ಮಾತು ಕೊಟ್ಟಿದ್ದಾರೆ ಅದಕ್ಕಾಗಿ ಸ್ಥಾನ ಕೇಳುತ್ತಿದ್ದೇನೆ ಎಂದು ವಿಶ್ವನಾಥ್ ಹೇಳಿದರು.
ಸಿಎಂ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಬೇಡ ಎಂದು ಹೇಳಿದ್ದು ಸತ್ಯ. ಆದರೆ ಸೋತರೆ ಸಚಿವ ಸ್ಥಾನ ಕೊಡೋದು ಕಷ್ಟ ಎಂದು ಹೇಳಿರಲಿಲ್ಲ. ಅವತ್ತು ಸಚಿವ ಸ್ಥಾನದ ಬಗ್ಗೆ ಚರ್ಚೆ ಆಗಿರಲಿಲ್ಲ. ಈ ಕ್ಷಣಕ್ಕೂ ನಾವೆಲ್ಲಾ ಶಾಸಕರು ಜೊತೆಯಾಗಿದ್ದೇವೆ. ನಾನು ಈ ತಂಡದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿಲ್ಲ ಎಂದು ವಿಶ್ವನಾಥ್ ಸ್ಟಪ್ಟಪಡಿಸಿದರು.