ಮೈಸೂರು: ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಮೈಸೂರಿನ ಅಮೃತೇಶ್ವರಿ ದೇಗುಲದಲ್ಲಿ ಮಹಾಲಕ್ಷ್ಮಿ ದೇವಿಗೆ ನೋಟುಗಳಿಂದ ಅಲಂಕಾರ ಮಾಡಲಾಗಿದೆ.
ದೀಪಾವಳಿ ಅಮವಾಸ್ಯೆ ಹಿನ್ನೆಲೆಯಲ್ಲಿ ಭಕ್ತರು ದೇಗುಲಕ್ಕೆ ನೀಡಿದ ಹಣ ಮತ್ತು ನಾಣ್ಯಗಳಲ್ಲಿಯೇ ದೇವಿಗೆ ಅಲಂಕಾರ ಮಾಡಲಾಗಿದೆ. ಅಲಂಕಾರಕ್ಕಾಗಿ ಸುಮಾರು 10 ಲಕ್ಷ ರೂ. ಬಳಸಲಾಗಿದೆ. ಬೆಳಗ್ಗೆ ಧನಲಕ್ಷ್ಮಿ ಹೋಮ ಮತ್ತು ಸಂಜೆ ಧನಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ನಂತರ ಭಕ್ತಾದಿಗಳಿಗೆ ಪ್ರಸಾದ, ನಾಣ್ಯ ಮತ್ತು ಕುಂಕುಮ ವಿತರಿಸಲಾಗುತ್ತದೆ ಎಂದು ಅರ್ಚಕ ಸೋಮಶೇಖರ್ ಹೇಳಿದ್ದಾರೆ.
ಇದೇ ವೇಳೆ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ಪ್ರಾಕೃತಿಕ ವಿಕೋಪಗಳು ಕಡಿಮೆಯಾಗಲೆಂದು ವಿಶೇಷ ಹೋಮ ಹವನಗಳನ್ನು ನೆರವೇರಿಸಲಾಯಿತು. ನೋಟುಗಳಿಂದ ದೇವಿಗೆ ಅಲಂಕಾರ ಮಾಡಿರೋದನ್ನು ನೋಡಲು ಭಕ್ತಾಧಿಗಳು ತಂಡೋಪತಂಡವಾಗಿ ಆಗಮಿಸಿದ ತಾಯಿಯ ದರ್ಶನ ಪಡೆದರು.