ಮೈಸೂರು: ದುಷ್ಕರ್ಮಿ ನಡೆಸಿದ ಕೊಲೆ ಯತ್ನದಿಂದ ಜೀವನ್ಮರಣ ಹೋರಾಟದಲ್ಲಿದ್ದ ಶಾಸಕ ತನ್ವೀರ್ ಸೇಠ್ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದು, ಇಂದು ಮೈಸೂರಿಗೆ ಹಿಂದುರಿಗಿದ್ದಾರೆ.
ಮೈಸೂರಿಗೆ ಆಗಮಿಸಿದ ತನ್ವೀರ್ ಸೇಠ್, ನೇರವಾಗಿ ಮೈಸೂರು ಕೇಂದ್ರ ಕಾರಾಗೃಹಕ್ಕೆ ಆಗಮಿಸಿದರು. ತಮ್ಮ ಮೇಲೆ ಕೊಲೆ ಯತ್ನ ನಡೆಸಿದ ಆರೋಪಿ ಗುರುತು ಪತ್ತೆಗೆ ಶಾಸಕರು ಕಾರಾಗೃಹಕ್ಕೆ ಬಂದರು. ಈ ವೇಳೆ ತಮ್ಮ ಶಾಸಕರನ್ನು ಮಾತನಾಡಿಸಲು ಬೆಂಬಲಿಗರು ಮುಗಿಬಿದ್ದರು. ಶಾಸಕರ ಕಂಡ ಕೆಲ ಬೆಂಬಲಿಗರು ಕಣ್ಣಿರಿಟ್ಟರು.
ಪೊಲೀಸ್ ಬಿಗಿ ಭದ್ರತೆಯಲ್ಲಿ ತನ್ವೀರ್ ಸೇಠ್ ಜೈಲಿಗೆ ಬಂದರು. ಕಳೆದ ವರ್ಷದ ನವೆಂಬರ್ 18 ರಂದು ರಾತ್ರಿ 11 ಗಂಟೆ ಸುಮಾರಿನಲ್ಲಿ ಮೈಸೂರಿನ ಬನ್ನಿಮಂಟಪದಲ್ಲಿ ನೂರಾರು ಜನರ ಮುಂದೆಯೇ ಶಾಸಕರ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಕುತ್ತಿಗೆ ಭಾಗಕ್ಕೆ ಮಚ್ಚಿನ ಪೆಟ್ಟು ಬಿದ್ದು ಜೀವನ್ಮರಣ ಹೋರಾಟ ನಡೆಸಿದ್ದರು.
ಆಗ ಮೈಸೂರಿನಲ್ಲಿ ಚಿಕಿತ್ಸೆ ಪಡೆದಿದ್ದ ಶಾಸಕ ತನ್ವೀರ್ ಸೇಠ್ರನ್ನು ಹೆಚ್ಚಿನ ಚಿಕಿತ್ಸೆಗೆ ವಿದೇಶಕ್ಕೆ ಕಳುಹಿಸಲಾಗಿತ್ತು. ಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿ ನಂತರ ದುಬೈನಲ್ಲೇ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಈಗ ವಿಶ್ರಾಂತಿ ನಂತರ ಮೈಸೂರಿಗೆ ಮರಳಿದ್ದಾರೆ.