ಮೈಸೂರು: ಮೊದಲು ಮನೆಗೆ ಬಂದವರಿಗೆ ಊಟ ಹಾಕಬೇಕು. ನಾವು ಹಸಿದುಕೊಂಡಿದ್ದರು ಪರವಾಗಿಲ್ಲ ಅವರಿಗೆ ಊಟ ಹಾಕುತ್ತೇವೆ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಅನರ್ಹ ಶಾಸಕರ ಪರ ಬ್ಯಾಟ್ ಮಾಡಿದ್ದಾರೆ.
ಇಂದು ದಸರಾ ಪ್ರಯುಕ್ತ ನಡೆದ ರಂಗೋಲಿ ಸ್ಪರ್ಧೆಯನ್ನು ಉದ್ಘಾಟನೆ ಮಾಡಿ ಸುದ್ದಿಗಾರರೊಂದಿಗೆ ಅನರ್ಹರ ಶಾಸಕರ ಕುರಿತ ಶಾಸಕ ಉಮೇಶ್ ಕತ್ತಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅವರ ಅಭಿಪ್ರಾಯ ಅವರಿಗೆ, ನನ್ನ ಅಭಿಪ್ರಾಯ ನನಗೆ. ಮೊದಲು ಮನೆಗೆ ಬಂದವರಿಗೆ ಊಟ ಹಾಕಬೇಕು ಎಂದು ಹೇಳಿದರು.
ಈ ವೇಳೆ ಸಚಿವ ಸಂಪುಟ ರಚನೆಯಲ್ಲಿ ನಿಮ್ಮನ್ನು ಕಡೆಗಣಿಸಲಾಗಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅರ್ಹತೆ ವಿಚಾರದಲ್ಲಿ ಈ ಭಾಗದಲ್ಲಿ ನಾನೋಬ್ಬನೆ ಬಿಜೆಪಿಯಲ್ಲಿ ತುಂಬಾ ಹಿರಿಯ ವ್ಯಕ್ತಿ. ಆದರೆ ಈಗ ಪರಿಸ್ಥಿತಿ ಆ ರೀತಿ ಇಲ್ಲ. ನಾನು ಒಬ್ಬ ಸ್ವಯಂಸೇವಕ, ಸಂಘ ನನಗೆ ಒಂದು ಶಿಸ್ತು ಕಲಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನಾನು ಹೇಗೆ ವರ್ತಿಸಬೇಕು ಅನ್ನೋದನ್ನು ನಾನು ಕಲಿತಿದ್ದೇನೆ. ನನಗೆ ಪಕ್ಷ, ರಾಜ್ಯ ಮತ್ತು ದೇಶ ಮುಖ್ಯ ಎಂದು ತಿಳಿಸಿದರು.
ಯಡಿಯೂರಪ್ಪ ಅವರ ತಂತಿ ಮೇಲಿನ ನಡಿಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ಬಗ್ಗೆ ಮಾತನಾಡೋಕೆ ನಾನು ಚಿಕ್ಕವನು. ಸಿಎಂ ಜೊತೆ ನಾವೆಲ್ಲ ಇದ್ದೇವೆ. ಅವರು ಯಾವುದಕ್ಕೂ ಚಿಂತಿಸುವ ಅಗತ್ಯವಿಲ್ಲ. ಸಿಎಂ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ. ಸಿಎಂಗೆ ಒತ್ತಡ ಇದ್ದೆ ಇರುತ್ತದೆ. ಅವರು ನಮ್ಮ ಟೀಂ ಕ್ಯಾಪ್ಟನ್. ಅವರ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಸಹಕಾರ ಇದ್ದೆ ಇರುತ್ತೆ ಎಂದು ಹೇಳಿದರು.
https://www.youtube.com/watch?v=LwXO4sOBHTs