– ಅಲ್ಪಸಂಖ್ಯಾತರ ಕುರಿತ ತಮ್ಮ ಹೇಳಿಕೆ ಸಮರ್ಥಿಸಿದ ರೇಣುಕಾಚಾರ್ಯ
ಮೈಸೂರು: ಯಾರು ಪೌರತ್ವ ಕಾಯ್ದೆ ವಿರೋಧಿಸುತ್ತಾರೋ ಅವರು ದೇಶದ್ರೋಹಿಗಳು. ಕಾಂಗ್ರೆಸ್ ಇರಬಹುದು, ಜೆಡಿಎಸ್ ಇರಬಹುದು. ಪೌರತ್ವ ಕಾಯ್ದೆ ವಿರೋಧಿಸುವವರು ದೇಶ ದ್ರೋಹಿಗಳು ಎಂದು ಶಾಸಕ ರೇಣುಕಾಚಾರ್ಯ ಮೈಸೂರಿನ ಸುತ್ತೂರು ಕ್ಷೇತ್ರದಲ್ಲಿ ಹೇಳಿದ್ದಾರೆ.
ಹೆಚ್ಡಿ ಕುಮಾರಸ್ವಾಮಿ ಅವರಿಗೆ ಬುದ್ಧಿ ಸ್ಥಿಮಿತವಾಗಿಲ್ಲ. ಕುಮಾರಸ್ವಾಮಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ನಡೆಯೇ ಅರ್ಥವಾಗುತ್ತಿಲ್ಲ. ರಕ್ಷಣಾ ಇಲಾಖೆಯ ಮಾನಸಿಕ ಸ್ಥೈರ್ಯ ಕುಗ್ಗಿಸುವಂತಹ ಹೇಳಿಕೆಯನ್ನು ಕುಮಾರಸ್ವಾಮಿ ನೀಡುತ್ತಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯಾದವರು ಈ ರೀತಿ ಮಾತನಾಡಿದರೆ ಹೇಗೆ? ಈ ರೀತಿ ಹೇಳಿಕೆ ನೀಡಿದರೆ ಜನ ಅದನ್ನು ಸ್ವಾಗತ ಮಾಡ್ತಾರಾ? ಎಂದು ಕಟುವಾಗಿ ಪ್ರಶ್ನಿಸಿದರು.
ಎಲ್ಲೋ ಒಂದು ಕಡೆ ಅಲ್ಪಸಂಖ್ಯಾತರಲ್ಲಿ ವಿಷ ಬೀಜ, ಜಾತಿ ಬೀಜ ಬಿತ್ತುವ ಕೆಲಸವನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ತಮ್ಮ ಅಧಿಕಾರವಧಿಯಲ್ಲಿ ಜಾತಿ ಜನಗಣತಿ ಮಾಡಿಸಿದ್ರು ಹಾಗಾದರೆ ಯಾವ ಕಾರಣಕ್ಕೆ ಮಾಡಿಸಿದ್ದರು. ಧರ್ಮ ಒಡೆಯುವ ಕೆಲಸವನ್ನು ಅವರು ಮಾಡಿದರು ಎಂದು ಕಿಡಕಾರಿದರು. ಪೌರತ್ವ ಕಾಯ್ದೆಯನ್ನು ಯಾರು ವಿರೋಧ ಮಾಡುತ್ತಾರೋ ಅವರನ್ನು ನಾನು ದೇಶದ್ರೋಹಿಗಳು ಎಂದು ಕರೆದಿದ್ದೀನಿ. ಇದರಲ್ಲಿ ತಪ್ಪೇನಿದೆ ಎಂದು ಮರುಪ್ರಶ್ನಿಸಿದರು.
ಯು.ಟಿ ಖಾದರ್ ಹಾಗೂ ಜಮೀರ್ ಅಹ್ಮದ್ ಬುದ್ಧಿ ಸ್ಥಿಮಿತ ಕಳೆದುಕೊಂಡಿದ್ದಾರೆ. ಇಬ್ಬರೂ ಸ್ಥಿಮಿತ ಕಳೆದುಕೊಂಡಿದ್ದಾರೆ. ಜಮೀರ್ ಅಹ್ಮದ್ ನಾನೇ ಅಲ್ಪಸಂಖ್ಯಾತರ ಮುಖಂಡ ಅಂದುಕೊಂಡಿದ್ದಾರೆ. ಮೊದಲು ಅವರೇ ಮತಾಂಧರು. ಎಲುಬಿಲ್ಲದ ನಾಲಿಗೆ ಎಂದು ಹುಚ್ಚುಚ್ಚಾಗಿ ಮಾತನಾಡುತ್ತಾರೆ ಎಂದ ಸುತ್ತೂರಿನಲ್ಲಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಹೇಳಿಕೆ ಸಮರ್ಥಿಸಿಕೊಂಡ ರೇಣುಕಾಚಾರ್ಯ:
ವೋಟ್ ಹಾಕೋದು ಬೇರೆಯವರಿಗೆ ಆದರೆ ಸವಲತ್ತುಗಳನ್ನು ಕೊಡಲು ನಾವು ಬೇಕಾ? ಅಲ್ಪ ಸಂಖ್ಯಾತರಿಗೆ ಎಂ.ಪಿ ರೇಣುಕಾಚಾರ್ಯ ಮತ್ತೊಮ್ಮೆ ಪ್ರಶ್ನಿಸಿದ್ದಾರೆ. ಅಲ್ಪ ಸಂಖ್ಯಾತರಿಗೆ ಯಾವುದೇ ಪ್ಯಾಕೇಜ್ ನೀಡುವುದಿಲ್ಲ ಎಂದು ಇತ್ತೀಚೆಗೆ ತಾವು ನೀಡಿರುವ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡರು. ನಮ್ಮ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತರಿಗೆ ನೀರು, ವಿದ್ಯುತ್, ರಸ್ತೆ ಮೊದಲಾದ ಮೂಲಭೂತ ಸೌಕರ್ಯಗಳನ್ನು ನೀಡುತ್ತೇವೆ. ಆದರೆ ಇತರೆ ಯಾವುದೇ ಪ್ಯಾಕೇಜ್ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಮಗೆ ಮತ ಹಾಕದಿದ್ದರೂ ಸಹ ನಾವು ಚುನಾವಣೆಯಲ್ಲಿ ಗೆಲ್ಲುತ್ತಿದ್ದಂತೆ ಹೂವಿನ ಹಾರದೊಂದಿಗೆ ಬಂದು ನಿಮಗೇ ಮತಹಾಕಿದ್ದೇವೆ ಎಂದು ಹೇಳುತ್ತಾರೆ. ಮತ ಯಾರಿಗೋ ಹಾಕಿ ನಮ್ಮ ಬಳಿಗೆ ಬಂದು ಸವಲತ್ತುಗಳನ್ನು ಕೇಳುತ್ತಾರೆ. ವೋಟ್ ಹಾಕೋದು ಯಾರಿಗೋ, ಸವಲತ್ತುಗಳನ್ನು ನೀಡಲು ನಾವು ಬೇಕೇ ಎಂದು ಪ್ರಶ್ನಿಸಿದರು.